ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೂರ್ಮ ಪುರಾಣ ಏನು ಹೇಳುತ್ತದೆ?

18 ಪುರಾಣಗಳು : ಕೂರ್ಮ ಪುರಾಣ ಏನು ಹೇಳುತ್ತದೆ?

ಕೂರ್ಮ ಪುರಾಣ
ಇದರಲ್ಲಿ ಬ್ರಾಹ್ಮೀ, ಭಾಗವತೀ, ಸೌರೀ ಮತ್ತು ವೈಷ್ಣವೀ ಎಂಬ ನಾಲ್ಕು ಸಂಹಿತೆಗಳಿವೆ ಎಂದು ಪುರಾಣವೇ ಹೇಳಿದರೂ ಲಭ್ಯವಾಗಿರುವುದು ಮೊದಲನೆಯ ಸಂಹಿತೆಯೊಂದೇ. ಸಮುದ್ರಮಥನ ಸಂದರ್ಭದಲ್ಲಿ ಮಂದರಗಿರಿಯನ್ನು ಹೊತ್ತ ವಿಷ್ಣುವಿನ ಕೂರ್ಮಾವತಾರದ ಸ್ತೋತ್ರದೊಂದಿಗೆ ಪ್ರಸ್ತುತ ಪುರಾಣ ಆರಂಭವಾಗುತ್ತದೆ. ಆಗ ಕಡಲಿಂದೆದ್ದು ಬಂದ ಲಕ್ಷ್ಮಿ ವಿಷ್ಣುಪತ್ನಿಯಾಗುತ್ತಾಳೆ.
ಇಂದ್ರದ್ಯುಮ್ನನೆಂಬ ದೊರೆ ಬ್ರಾಹ್ಮಣನಾಗಿ ಜನಿಸಿ, ಲಕ್ಷ್ಮಿಯಿಂದ ಉಪದೇಶಪಡೆದು, ಸರ್ವಚರಾಚರಗಳ ಸರ್ಗ, ಸ್ಥಿತಿ, ಪ್ರಲಯ ಕಾರಣನೆಂದು ಆರಾಧಿಸಿ, ಕೂರ್ಮಾವತಾರದ ಮೂಲಕ ಕೂರ್ಮಪುರಾಣವನ್ನು ಅರಿತುಕೊಳ್ಳುತ್ತಾನೆ. ಹರಸರ್ವೋತ್ತಮತ್ವವನ್ನೂ ತ್ರಿಮೂರ್ತಿಗಳ ಐಕ್ಯವನ್ನೂ ಪ್ರಸ್ತುತಪುರಾಣ ಪ್ರತಿಪಾದಿಸುತ್ತದೆ. ಹರನ ಶಕ್ತಿಯ 8,000 ಹೆಸರುಗಳಿಲ್ಲಿ ಬಂದಿವೆ.
ಹರಿಹರರೊಂದು, ಲಕ್ಷ್ಮೀ ಪಾರ್ವತಿಯರೊಂದು ಎಂದು ಹೇಳಿದರೂ ವಿಷ್ಣುವಿನ ಅವತಾರವೆನ್ನಿಸಿದ ಕೃಷ್ಣ ತನ್ನ ಪತ್ನಿಯಾದ ಜಾಂಬವತಿಯಲ್ಲಿ ಮಗನನ್ನು ಪಡೆಯಬೇಕಾದರೆ ಕಠಿನ ತಪವನ್ನೆಸಗಿ, ಶಿವಾನುಗ್ರಹವನ್ನು ಪಡೆಯಬೇಕಾಯಿತು-ಎಂದು ಹೇಳಿರುವುದು ಹರ ಪಕ್ಷಪಾತಕ್ಕೆ ಪ್ರಮಾಣ. ಕೂರ್ಮಪುರಾಣ ಪಂಚಲಕ್ಷಣಗಳಿಂದ ಕೂಡಿದೆ. ವಿಷ್ಣುವಿನ ಕೆಲ ಅವತಾರಗಳನ್ನಿಲ್ಲಿ ಹೇಳಿದರೂ ಒಂದು ಇಡೀ ಅಧ್ಯಾಯ ಶಿವಾವತಾರಗಳ ವರ್ಣನೆಗೇ ಮುಡಿಪಾಗಿದೆ.
ಕಾಶೀ ಪ್ರಯಾಗ ಮಾಹಾತ್ಮ್ಯಗಳಲ್ಲದೆ, ಭಗವದ್ಗೀತೆಗೆ ಸರಿದೊರೆಯಾದ ಈಶ್ವರಗೀತೆಯೂ ಬಂದಿರುವುದು ಈ ಪುರಾಣದ ವೈಶಿಷ್ಟ್ಯ. ಅನಂತರ ವ್ಯಾಸಗೀತೆ, ಪ್ರಾಯಶ್ಚಿತ ವಿಧಿ, ಪಾತಿವ್ರತ್ಯಪ್ರಶಂಸೆ ಮುಂತಾದ ವಿಷಯಗಳು ಬರುತ್ತವೆ. ರಾಮಾಯಣದಲ್ಲಿಲ್ಲದ ಸೀತಾವೃತ್ತಾಂತವೊಂದಿಲ್ಲಿ ಪಾತಿವ್ರತ್ಯ ಮಾಹಾತ್ಮ್ಯವನ್ನು ನಿದರ್ಶಿಸುತ್ತದೆ. ಇಲ್ಲಿ ರಾವಣನ ಕೈಯಿಂದ ಸೀತೆಯನ್ನು ಅಗ್ನಿಯೇ ಬಿಡಿಸಿ ಕಾಪಾಡುತ್ತಾನೆ.
ಇದರಲ್ಲಿ 17,000, ಶ್ಲೋಕಗಳಿದ್ದ ವೆಂದು ಪ್ರಸಿದ್ಧಿ; 6,000 ಶ್ಲೋಕಗಳನ್ನು ಮಾತ್ರ ಉಪಲಬ್ಧ ಪ್ರತಿಯಲ್ಲಿ ಕಾಣಬಹುದು. ಇದರ ಏಳನೆಯ ಅಧ್ಯಾಯದಲ್ಲಿ ಬರುವ ಸೃಷ್ಟಿ ವಿವರಣೆ ವ್ಯಾಹತವಾಗಿರುವುದರಿಂದ ಒಂದಕ್ಕಿಂತ ಹೆಚ್ಚು ಪೌರಾಣಿಕರ ಕೈವಾಡದಿಂದ ಇದು ರಚಿತವಾಯಿತೆಂಬುದನ್ನು ನಿರ್ಧರಿಸ ಬಹುದು.
ಮಹಾಭಾರತದ ಸೃಷ್ಟಿ ವಿವರಣೆಯನ್ನು ಪ್ರಸ್ತುತ ಪುರಾಣ ಸ್ಪಷ್ಟವಾಗಿ ಅನುಸರಿಸಿರುವುದರಿಂದಲೂ ಮತ್ಸ್ಯಪುರಾಣಕ್ಕೆ ಗೊತ್ತಿಲ್ಲದಿದ್ದ ಮಹಾಪುರಾಣಗಳ ಹದಿನೆಂಟನ್ನಿದು ಉಲ್ಲೇಖಿಸುವುದರಿಂದಲೂ ಇದರ ಪ್ರಸ್ತುತರೂಪದ ಕಾಲ ಕ್ರಿ.ಶ. 650ಕ್ಕೂ ಈಚಿನದೆನ್ನಬಹುದು. ಕೂರ್ಮಪುರಾಣದ ಪ್ರಕಾರ ದೇವರು ಅವ್ಯಕ್ತ, ಅಜ್ಞೇಯ, ನಿತ್ಯ, ಜಗತ್ಕಾರಣ, ಸದಸದಾತ್ಮಕ, ಪ್ರಕೃತಿಯಿಂದ ಅಭಿನ್ನ, ಸರ್ವನಿರ್ದೇಶಕ, ಗುಣತ್ರಯದ ಸಾಮ್ಯಾವಸ್ಥೆಯಲ್ಲದವ ಪರಬ್ರಹ್ಮ, ಪುರುಷಗರ್ಭ.
ಇದು ಅವನ ಪ್ರಾಕೃತಪ್ರಲಯ ಸ್ಥಿತಿ. ಇಲ್ಲಿಂದ ಮುಂದೆ ಅವನು ಪ್ರಕೃತಿ, ಪುರುಷರಲ್ಲಿ ದೇವತ್ವಪ್ರಕಟಣೆಗಾಗಿ ಪ್ರವೇಶಿಸಿದಾಗ ಜಗತ್ಸೃಷ್ಟಿಗಾರಂಭ. ದೇವರು ಪ್ರಕೃತಿಯಾಗಿ ನಡೆದುಕೊಳ್ಳುವುದೆಂದರೆ ಸಂಕೋಚ ವಿಕಾಸಶೀಲನಾಗುವುದೆಂದರ್ಥ. ಪ್ರಧಾನ ಪುರುಷಾತ್ಮಕವಾದ ಮಹತ್ ಕಾರಣವೆಂಬುದು ಅವನ ಆದ್ಯಸೃಷ್ಟಿ.
ಅದರಿಂದ ಮಹತ್, ಆತ್ಮ, ಮತಿ, ಬ್ರಹ್ಮ, ಪ್ರಬುದ್ಧಿ, ಖ್ಯಾತಿ, ಈಶ್ವರ, ಪ್ರಜ್ಞೆ, ಧೃತಿ, ಸ್ಮೃತಿ, ಅಥವಾ ಸಂವಿತ್ ಎಂಬ ಪದಾರ್ಥ ಹುಟ್ಟುತ್ತದೆ. ಹೀಗೆ ವಿವಿಧ ನಾಮಗಳುಳ್ಳ ಈ ಮಹತ್ತಿನಿಂದ ವೈಕಾರಿಕ, ತೈಜಸ ಮತ್ತು ಭೂತಾದಿ ಎಂಬ ಅಹಂಕಾರತ್ರಯ ಉದಯಿಸುತ್ತದೆ. ಈ ತ್ರಿವಿಧಾಹಂಕಾರಕ್ಕೆ ಅಭಿಮಾನ, ಕರ್ತ, ಮಂತ, ಆತ್ಮ, ಎಂಬ ಹೆಸರುಗಳಿವೆ.

Leave a Reply

Your email address will not be published. Required fields are marked *

Translate »