ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಕ್ಕಳು ಬೇಡಿದ್ದನ್ನು ಕೊಡಬಾರದು – ಮಹಾಭಾರತದ ಕಥೆ

ಮಕ್ಕಳು ಬೇಡಿದ್ದನ್ನು ಕೊಡಬಾರದು

ವೀಣಾ ಬನ್ನಂಜೆ

ಇತ್ತೀಚೆಗೆ ಒಂದು ಚಟ. ಮನೆಯಲ್ಲಿ ಮಾಡಿದ ಅಡುಗೆ ಬೇರೆ. ಮಕ್ಕಳಿಗೆ ಮಾಡುವ ಅಡುಗೆ ಬೇರೆ. ಮನೆಯವರಿಗೆಲ್ಲ ಉಪ್ಪಿಟ್ಟು. ಮಗು ಮೂಗು ಮುರಿಯುತ್ತದೆ. ಅಳುತ್ತದೆ. ಬೇರೆ ಏನನ್ನೋ ಬೇಡುತ್ತದೆ. ಅಮ್ಮ ಅದರ ಅಪೇಕ್ಷೆ ಕೇಳುತ್ತಾಳೆ. ಅದಕ್ಕೆ ನೂಡಲ್ಸ್ ಬೇಕು. ಅಥವಾ ಪಿಜ್ಜಾ, ಬರ್ಗರ್…. ಇನ್ನೇನೋ.

ಮಗು ಅಳಬಾರದು. ಅಂತೂ ಅದರ ಅಪೇಕ್ಷೆ ಒದಗಿಸಬೇಕು. ಇದೀಗ ಎಲ್ಲ ಮನೆಗಳ ಕಥೆ. ಮಗುವಿನ ಅಪೇಕ್ಷೆಗೆ ಆದ್ಯತೆ. ಅದು ಅತ್ತರೆ ಅಪ್ಪ ಬಯ್ಯುವುದು ಅಮ್ಮನನ್ನೆ.

ಹೀಗೆ ಮಾಡಿದರೆ ಏನು ತಪ್ಪು? ಹಿಂದೆ ಅಷ್ಟು ಸೌಕರ್ಯ ಇರಲಿಲ್ಲ. ಬಡತನ ಇತ್ತು. ಈಗ ಕೊಡುವ ತಾಕತ್ತು ಇದೆ ಕೊಡಿಸಲಿ? ನಾವು ಹಾಕಿದ್ದು ತಿಂದಿದ್ದೇವೆ ಅಂತ ಅವರು ಯಾಕೆ ತಿನ್ನಬೇಕು? ನಮಗೆ ಬೇರೆ ಗತಿಯಿರಲಿಲ್ಲ. ಹೀಗೆ ಒಂದು ವಾದವೂ ಇದೆ.

ಬಹಳ ಹಿಂದೆ ಅಶ್ವತ್ಥಾಮ ಎಂಬ ಮಗು ಇದ್ದ. ಮಹಾತಪಸ್ವಿಯ ಮಗ. ಹೊಲದಲ್ಲಿ ಬಿದ್ದ ಧಾನ್ಯ ಆರಿಸಿ ತಂದು ಊಟ ಮಾಡತ್ತಿದ್ದವ ದ್ರೋಣ. ಅಂತಿಂಥ ತಪಸ್ವಿ ಅಲ್ಲ. ನಿಜವಾದ ಬ್ರಾಹ್ಮಣ.

ಅವನಿಗೆ ಕೃಪಾಚಾರ್ಯರ ತಂಗಿ ಕೃಪಿ ಹೆಂಡತಿ. ಈ ಕೃಪಾಚಾರ್ಯರು ಧೃತರಾಷ್ಟ್ರನ‌ ಅರಮನೆಯವರು. ದ್ರೋಣಾಚಾರ್ಯರು ಇದರಿಂದ ತುಂಬಾ ದೂರ. ಆದರೆ ಮಗುವಿಗೆ ಕೃಪಾಚಾರ್ಯರು ಮಾವ. ಈ ಮಾತುಲ ಅರಮನೆಗೆ ಹತ್ತಿರ. ಮಾವನ ಕಾರಣಕ್ಕೆ ಈ ಮಗುವೂ ಅರಮನೆ ಹೊಕ್ಕಿತು. ಅಲ್ಲಿ ಅದು ನೋಡಿದ್ದು ದೊಡ್ಡವರನ್ನು. ದೊಡ್ಡವರ ಊಟವೇ ಬೇರೆ. ಪೇಯವೂ ಬೇರೆ. ಮಗು ಅವರಲ್ಲಿ ಹಾಲು ಕುಡಿಯಿತು.

  ಗುರು ಪೂರ್ಣಿಮೆ ಪೂಜೆ ವಿಧಾನ ಹಾಗೂ ಮಹತ್ವ

ಈ ಹಾಲನ್ನು ಮನೆಯಲ್ಲಿ ಕೇಳಿತು. ಎಲ್ಲಿಂದ ಕೊಡಬೇಕು ಈ ತಪಸ್ವಿಯ ಹೆಂಡತಿ? ಅವಳು ಹಿಟ್ಟಿಗೆ ನೀರು ಸೇರಿಸಿ ಕೊಟ್ಟಳು. ಮಗು ಇದು ಅದಲ್ಲ ಎಂದಿತು. ಹೋಲಿಕೆ…. ಎಲ್ಲ ದುಃಖದ ಮೂಲ.

ಮಗು ಆ ಅದೇ ಹಾಲನ್ನು ಕೇಳಿತು. ನಿತ್ಯ ಒತ್ತಾಯ. ತಾಯಿಗೆ ಸಂಕಟ. ಗಂಡನನ್ನು ಮೊರೆಹೊಕ್ಕಳು.

ಜೀವನದಲ್ಲಿ ಹೊಟ್ಟೆಗೆ ಊಟ ಬೇಡದವ. ಕಾಳು ಆರಿಸಿ ಉಂಡವ. ಮಗನಿಗಾಗಿ ಬೇಡಲು ಹೊರಟ.ಅದೂ ಯಾರ ಬಳಿ? ಖಾಸಾ ಗೆಳೆಯನ‌ ಹತ್ತಿರ. ಅವನು ಈಗ ರಾಜ. ಕೇಳಿದ್ದು ಒಂದು ದನ, ಅವನು ಕೊಟ್ಟಿದ್ದು ಅವಮಾನ. ಕೊಡದಿದ್ದರೆ ಚಿಂತೆ ಇಲ್ಲ, ಅವಮಾನ ಕೊಡಬಾರದು. ಮಗನ ಮೋಹಕ್ಕೆ ತಂದೆಗೆ ಸಿಕ್ಕ ಫಲ.

ಎಲ್ಲಿಗೆ ಎಳೆದೊಯ್ದಿತು? ನಿಷ್ಠಾವಂತ ತಪಸ್ವಿ ಕ್ಷತ್ರಿಯನಾದ. ಅಂತಿಂಥ ಕ್ಷತ್ರಿಯನಲ್ಲ. ಕೌರವ ಪಾಂಡವರಿಗೆ ಬಿಲ್ವಿದ್ಯೆಯ ಗುರು. ಬ್ರಹ್ಮಾಸ್ತ್ರದ ಉಡುಗೊರೆ ಕೊಡುವಷ್ಟು ಧೀರ. ಬ್ರಾಹ್ಮಣ ಕ್ಷತ್ರಿಯನಾದದ್ದು ಮಗನ ಆಸೆಗೆ.

  ಲಿಂಗ ಪೂಜೆಯು ಮತ್ತು ಪಾರ್ವತಿಯು ಬಾಣ ರೂಪಳೆಂದು ಪ್ರಸಿದ್ಧಿಯಾಗಲು ಕಾರಣವೇನು ?

ಎಲ್ಲಿಗೆ ಬಂತು ಅವನ ಸ್ಥಿತಿ? ಸಹಸ್ರಾರು ಯೋಧರನ್ನು ಕೊಂದ. ಕಡೆಗೂ ಅಶ್ವತ್ಥಾಮ ಸತ್ತ ಎಂಬ ಸುದ್ದಿ ಕೇಳಿಯೇ ಸತ್ತ. ಅಲ್ಲಿಯೂ ಮಗನ ಮೋಹ.

ಈ ಹಾಲುಂಡ ಮಗನಾದರೂ ಬೆಳೆದನಾ? ಎಂಥಾ ದುರವಸ್ಥೆ. ಅಪ್ಪ ಬ್ರಹ್ಮಾಸ್ತ್ರ ಕೊಡುವಾಗಲೂ ಮನಸ್ಸಿಲ್ಲದೆ ಕೊಟ್ಟ. ಸರಿಯಾಗಿ ಸಮಯಕ್ಕೆ ಉಪಯೋಗ ಆಗದಂತೆ ಹೇಳಿದ.

ಹಾಲಿನ‌ ಅಪೇಕ್ಷೆಗೆ ಅಪ್ಪನನ್ನು ದೂಡಿದ ಮಗ. ಅಪ್ಪ ಕೊಟ್ಟ ಬ್ರಹ್ಮಾಸ್ತ್ರವನ್ನು ಹಸುಳೆಯನ್ನು ಕೊಲ್ಲಲು ಬಳಸಿದ. ಹೋಗಲಿ, ಮುಕ್ತನಾದನಾ? ಕೃಷ್ಣ ಶಾಪ ಹೊತ್ತು ನಾಯಿಯಂತೆ ಅಲೆದ. “ಹಸಿದು ತಿರುಗಾಡು, ಅರಣ್ಯದಲ್ಲಿ ಹುಚ್ಚನಂತೆ ಅಲೆ. ಮೈ ಬಾಯಿ ದುರ್ಗಂಧ ಬರಲಿ. ಯಾರೂ ಸೇರದಿರಲಿ. ಅದೂ ಎಷ್ಟು ಸಮಯ. ಮೂರು ಸಾವಿರ ವರ್ಷ ಹೀಗೆ ಅಂಡಲೆ”

ಇಂಥ ದುಷ್ಟ ಶಾಪ ಪಡೆದು ಅರಣ್ಯ ಸೇರಿದ. ಈಗಲೂ ಅಲೆಯುತ್ತಾನೆ. ಅಲ್ಲಿ ಇಲ್ಲಿ ಊಟಕ್ಕೆ ಬಂದು ಹೋಗುತ್ತಾನೆ. ಹುಚ್ಚನಂತೆ ಇರುತ್ತಾನೆ ಎಂಬ ಪ್ರತೀತಿ ಇದೆ.

ಒಂದು ದೃಷ್ಟಿಯಿಂದ ಎಂಥಾ ತಪಸ್ವಿಯ ಕುಲ? ಯಾವ ಅಧಃಪತನವನ್ನು ಕಂಡಿತು? ಮೂಲ ಶೋಧಿಸಿದರೆ ಅದು ಅಮ್ಮ ಕೊಟ್ಟಿದ್ದನ್ನು ತಿನ್ನದ ತಪ್ಪಿನ ಫಲ. ದುರ್ಯೋಧನನ ಮನೆಯ ಹಾಲು ಮಾಡಿದ ಪರಿಣಾಮ. ಬಹಳ ದೊಡ್ಡ ಬ್ರಾಹ್ಮಣ ಕನಿಷ್ಠ ಕ್ಷತ್ರಿಯನಾದ ಕಥೆ. ಒಬ್ಬ ಕೌಶಿಕ ವಿಶ್ವಾಮಿತ್ರನಾದ ಆದರ್ಶಕ್ಕೆ ತದ್ವಿರುದ್ಧ. ಬಯಸಿದರೂ ದೊಡ್ಡದನ್ನು ಬಯಸಬೇಕು. ಬೇಡಿದರೆ ಪರಮವನ್ನು ಬೇಡಬೇಕು. ಹಾಗಾದಾಗ ಕೌಶಿಕ ವಿಶ್ವಾಮಿತ್ರನಾಗುತ್ತಾನೆ. ಕೇಡಿನ ಬೇಡುವಿಕೆಗೆ ಕೆಡುಕಿನ ಕಿಡಿ. ಅದೇ ಬೆಂಕಿಯಾಗಿ ಕುಲ ಸುಟ್ಟೀತು. ದ್ರೋಣಾಚಾರ್ಯರ ವಂಶವೇ ಸುಟ್ಟು ಭಸ್ಮ ಆಯಿತು. ಅಮ್ಮನನ್ನು ಕಾಡಿದ ಪಾಪಕ್ಕೆ.

  ದೇವಸ್ಥಾನದಲ್ಲಿ ತೀರ್ಥ ಸೇವನೆ ಮಾಡುವ ಕ್ರಮ

ಈಗ ದುರ್ಯೋಧನನ ಅರಮನೆ ಜಾಗದಲ್ಲಿ ಹೋಟೆಲ್ ಗಳು ಇವೆ. ಅಮ್ಮ ಮಾಡಿದ ಆಹಾರ ಬೇಡವೆನಿಸಿದೆ. ಪ್ರತೀ ಮನೆಯಲ್ಲಿ ಅಶ್ವತ್ಥಾಮರ ಕಾಟ. ತಾಯಿ‌ ತಂದೆಯರೆಲ್ಲ ದ್ರೋಣ ಕೃಪಿಗಳೇ. ವಂಶದಿಂದ ಬಂದ ಆಹಾರ ವ್ರತ ನಿಯಮ ತೂರಿಯಾಯಿತು. ಇನ್ನೇನು ಉಳಿದದ್ದು ಕುಲನಾಶ. ಈಗ ನಾಶ ಆಗಲಿಕ್ಕೆ ಇರುವುದು ಒಂದು ದ್ರೋಣ ಕುಟುಂಬ ಅಲ್ಲ. ಮನುಕುಲವೇ ಆ ಕಡೆಗೆ ಇದೆ.

ನಾಲಿಗೆ ಚಪಲಕ್ಕೆ ಇದಕ್ಕಿಂತ ದೊಡ್ಡ ಬೆಲೆ ಇನ್ನೇನು ತೆರಬೇಕು? ವಿಷಾದದ ಅನುಕಂಪ ಈ‌ ಅಶ್ವತ್ಥಾಮ ಕುಲಕ್ಕೆ.

Leave a Reply

Your email address will not be published. Required fields are marked *

Translate »