ಭಗವಂತ ಸರ್ವವ್ಯಾಪಿ – ಶ್ರೀಕೃಷ್ಣ ಕಾಪಾಡು

ಶ್ರೀಕೃಷ್ಣನನ್ನು ಕಾಪಾಡು ಎಂದು ಮೊರೆಯಿಟ್ಟ ಒಂದು ಕಥೆ

ಪಾಂಡವರು ಕೌರವರೊಂದಿಗೆ ಪಗಡೆ ಆಟದಲ್ಲಿ ಸೋತಾಗ ಪಂದ್ಯದ ನಿರ್ಣಯದಂತೆ ವನವಾಸಕ್ಕೆ ಹೋಗಬೇಕಾಯಿತು. ಭಗವಾನ್ ಶ್ರೀ ಕೃಷ್ಣನಿಗೊಮ್ಮೆ ವನಜೀವನ ನಡೆಸುತ್ತಿದ್ದ ಪಾಂಡವರನ್ನು ನೋಡಿಕೊಂಡು ಬರಬೇಕೆಂದು ಮನಸ್ಸಾಗಿ ಅರಣ್ಯಕ್ಕೆ ತೆರಳಿದ. ಅಲ್ಲಿ ಪಾಂಡವರ ಹಾಗೂ ದ್ರೌಪದಿಯ ಯೋಗಕ್ಷೇಮ ವಿಚಾರಿಸಿದ ಕೃಷ್ಣನು ಪ್ರಯಾಣದ ದಣಿವು ನಿವಾರಿಸಿಕೊಳ್ಳಲು ಸ್ನಾನಕ್ಕೆ ಬಿಸಿ ನೀರನ್ನು ಅಣಿಗೊಳಿಸಲು ಹೇಳಿದ.

ದ್ರೌಪದಿ ಒಲೆ ಹೊತ್ತಿಸಿ ಪಾತ್ರೆಗೆ ನೀರು ಸುರಿದಳು. ಸ್ವಲ್ಪ ಸಮಯದ ನಂತರ ನೀರು ಬಿಸಿಯಾಗಿದೆಯೇ ಎಂದು ಕೈ ಅದ್ದಿ ನೋಡಲು, ಅದು ಸ್ವಲ್ಪವೂ ಬಿಸಿಯಾಗಿರಲಿಲ್ಲ. ಹಾಗಾಗಿ ಮತ್ತಷ್ಟು ಉರಿ ಹೆಚ್ಚಿಸಿದಳಂತೆ. ಆದರೆ, ಎಷ್ಟೇ ಉರಿ ಹೆಚ್ಚಿಸಿದರೂ ನೀರು ಬಿಸಿ ಆಗದೇ ಇದ್ದುದನ್ನು ದ್ರೌಪದಿಯು ಪಾಂಡವರಿಗೆ ತಿಳಿಸಿದಳು. ಪಾತ್ರೆಯಲ್ಲಿ ನೀರು ಬಿಸಿಯಾಗದೇ ಇರುವುದನ್ನು ಪಾಂಡವರು ಗಮನಿಸಿ ಕಾರಣ ತಿಳಿಯದೇ ತಬ್ಬಿಬ್ಬಾದರು.

  ಮಾಧ್ವ ಸ೦ಪ್ರದಾಯದ ಸೂತ್ರಗಳು ..!

ಏನು ಮಾಡಬೇಕೆಂದು ತೋಚದೆ ಕಡೆಗೆ ನೀರು, ಬಿಸಿಯಾಗದಿರಲು ಕಾರಣ ಏನು? ಎಂದು ಶ್ರೀಕೃಷ್ಣನನ್ನೇ ಕೇಳಿದರು. ಆಗ ಆ ಪರಮಾತ್ಮ ಪಾತ್ರೆಯೊಳಗಿನ ನೀರನ್ನು ಹೊರ
ಚೆಲ್ಲಿ ಹೊಸ ನೀರನ್ನು ಹಾಕಿ ಕಾಯಿಸುವಂತೆ ಸೂಚಿಸಿದ. ಕೃಷ್ಣ ಹೀಗೇಕೆ ಹೇಳುತ್ತಿದ್ದಾನೆಂದು ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯ. ಆದರೂ ಆತನ ಅನುಮತಿಯಂತೆ ನೀರನ್ನು ಹೊರ ಚೆಲ್ಲಿದಾಗ ಪಾತ್ರೆಯ ತಳದಲ್ಲಿ ಕಪ್ಪೆಯೊಂದು ಇರುವುದು ಪಾಂಡವರ ಗಮನಕ್ಕೆ ಬಂತು.

ಈ ಬಗ್ಗೆ ಆಶ್ಚರ್ಯದಿಂದ ಪಾಂಡವರು ಕೃಷ್ಣನಲ್ಲಿ ಹೇಳಿದಾಗ. “ಹೌದು, ಆ ಕಪ್ಪೆ ನನ್ನನ್ನು ಕಾಪಾಡು ಕಾಪಾಡು ಎಂದು ಮೊರೆ ಇಟ್ಟಿತು. ಹಾಗಾಗಿ ನಾನು ಆ ಕಪ್ಪೆಯನ್ನು ಕಾಪಾಡಿದೆ” ಎಂದನಂತೆ. ಭಕ್ತವತ್ಸಲನಾದ ಶ್ರೀಕೃಷ್ಣನನ್ನು ಕಂಡು ಪಾಂಡವರು ಮೂಕವಿಸ್ಮಿತರಾದರು. ಹೌದು! “ಕೊಲ್ಲುವುದಕ್ಕಿಂತ ಕಾಯುವ ಕೈ ದೊಡ್ಡದು”. ರಕ್ಷಣೆಗಾಗಿ ಮೊರೆಯಿಟ್ಟಾಗ ಆ ಸೃಷ್ಟಿಕರ್ತ ಹೀಗೆ ತನ್ನ ಸೃಷ್ಟಿಯನ್ನು ಕೈಹಿಡಿದು ಕಾಪಾಡುತ್ತಾನೆ ಎಂಬುದಕ್ಕೆ ಕನಕದಾಸರು ಹೀಗೆ ಹೇಳುತ್ತಾರೆ.

  ಎಂಜಲೆಲೆಯ ತೆಗೆದಾ ಶ್ರೀ ಕೃಷ್ಣ

“ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೋ…? ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ”. ಅಂದರೆ, ಕಾಡಿನಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರಾದಿಗಳನ್ನು ಕೊಡುವುದರೊಂದಿಗೆ, ಜನನಿಯಂತೆ ಬರುವ ಆ ಭಗವಂತ ಹೊಣೆಯರಿತು ನಮ್ಮನೆಲ್ಲಾ ರಕ್ಷಿಸುತ್ತಾನೆ
ಎಂಬುದು ಇದರ ಭಾವ.
‌ ನಿಜ, ಭಗವಂತ ಸರ್ವವ್ಯಾಪಿ, ಸರ್ವಸ್ಪರ್ಶಿ ಎನ್ನುವದು ಇದಕ್ಕಾಗಿಯೇ. ಭಗವಂತನಿಲ್ಲದ ಈ ಜಗತ್ತಿನ ಅಸ್ತಿತ್ವವಿಲ್ಲ. ಆತನಿಲ್ಲದೆ ಏನೂ ಇಲ್ಲ. ಹಾಗಾಗಿ ತಿಳಿದವರು ಹೇಳುವುದು “ಭಗವಂತ ಸರ್ವವ್ಯಾಪಿ; ಸರ್ವಸ್ಪರ್ಶಿ”.

Leave a Reply

Your email address will not be published. Required fields are marked *

Translate »