ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಷ್ಣು ಸಹಸ್ರನಾಮ ಹುಟ್ಟಿದ ಕಥೆ – ಭೀಷ್ಮಾಚಾರ್ಯರು ದೇಹತ್ಯಾಗ ಮಾಡಿದ ದಿನ

ಶ್ರೀ ಭೀಷ್ಮಾಚಾರ್ಯರು ತಮ್ಮ ದೇಹತ್ಯಾಗವನ್ನು ಮಾಡಿದ ದಿನ… ‌ ‌ ಮಾಘ ಮಾಸದ ಶುದ್ಧ ಅಷ್ಟಮಿ. ಆಜೀವ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ ಎಂದು ಶಪಥ ಮಾಡಿ, ಮಹಾಭಾರತದಲ್ಲಿ ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿ ಪಿತಾಮಹರೇ ಎನಿಸಿದ್ದ ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಇಚ್ಛಾಮರಣಿಗಳಾಗಿ ತಮ್ಮ ಜೀವನವನ್ನು ತ್ಯಜಿಸಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾಯುತ್ತಿದ್ದ ಶ್ರೀ ಭೀಷ್ಮಾಚಾರ್ಯರು ತಮ್ಮ ದೇಹತ್ಯಾಗವನ್ನು ಮಾಡಿದ ದಿನ. ಹಾಗಾಗಿ ಈ ದಿನವನ್ನು ಭೀಷ್ಮಾಷ್ಟಮಿ ಎಂದೂ ಕರೆಯಲಾಗುತ್ತದೆ.

ಮಹಾಭಾರತದಲ್ಲಿ ಶಂತನು ಮತ್ತು ಗಂಗಾದೇವಿಯ ಪುತ್ರನಾಗಿ ಜನಿಸಿದ್ದ ದೇವವ್ರತ ಸಹಜವಾಗಿಯೇ ಶಂತನುವಿನ ಉತ್ತರಾಧಿಕಾರಿಗಳಾಗಿರುತ್ತಾರೆ. ವಯಸ್ಸಿಗೆ ಬಂದ ಮಗನಿದ್ದರೂ ಯೋಜನಗಂಧಿಯನ್ನು ಮೋಹಿಸಿ ಮದುವೆ ಆಗಲು ಶಂತನು ನಿರ್ಧರಿಸಿದಾಗ ಆಕೆಯ ತಂದೆ, ತನ್ನ ಮಗಳ ಮಕ್ಕಳಿಗೆ ಪಟ್ಟಾಭಿಷೇಕ ಮಾಡುತ್ತೇನೆ ಎಂದು ವಚನ ಕೊಡದ ಹೊರತು ತನ್ನ ಮಗಳನ್ನು ಮದುವೆ ಮಾಡಿಕೊಡಲಾರೆ ಎಂದು ಪಟ್ಟು ಹಿಡಿದಿದ್ದಾಗ, ತಂದೆಯ ಆಸೆಯನ್ನು ತೀರಿಸುವ ಸಲುವಾಗಿ ತಾನು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡಿ ಭೀಷ್ಮ ಪ್ರತಿಜ್ಞೆ ಎಂದೇ ಪ್ರಖ್ಯಾತವಾಗಿ ದೇವವ್ರತರು ಮುಂದೇ ಭೀಷ್ಮಾಚಾರ್ಯರೆಂದೇ ಪ್ರಖ್ಯಾತರಾಗುತ್ತಾರೆ.

ತನಗಾಗಿ ತನ್ನ ಯೌವ್ವನದ ಜೀವನವನ್ನೇ ಮುಡುಪಾಗಿಟ್ಟ ಕಾರಣ, ಅವರ ತಂದೆ ಆತನಿಗೆ ಇಚ್ಛಾಮರಣಿ ಆಗುವಂತೆ ವರ ಕೊಡುತ್ತಾರೆ. ಅಂದಿನಿಂದ ಭೀಷ್ಮಾಚಾರ್ಯರು ಇಡೀ ಜೀವನಪೂರ್ತಿ ಬ್ರಹ್ಮಚರ್ಯವನ್ನು ಪಾಲಿಸುತ್ತಲೇ ಹಸ್ತಿನಾಪುರದ ಒಳಿತಿಗಾಗಿ ಶ್ರಮಿಸುತ್ತಾರಲ್ಲದೇ, ಇಷ್ಟವಿಲ್ಲದಿದ್ದರೂ ಕುರುಕ್ಷೇತ್ರದಲ್ಲಿ ಅನಿವಾರ್ಯವಾಗಿ ಕೌರವರ ಪರ ಪಾಂಡವರ ವಿರುದ್ಧ ಯುದ್ಧಕ್ಕೆ ಇಳಿಯುತ್ತಾರೆ.

ಯುದ್ಧದಲ್ಲಿ ಭೀಷ್ಮಾಚಾರ್ಯರನ್ನು ಸೋಲಿಸುವುದು ಕಷ್ಟ ಎಂದು ಅರಿತ ಶ್ರೀ ಕೃಷ್ಣನು ಶಿಖಂಡಿಯನ್ನು ಅವರ ಮುಂದೆ ಯುದ್ದಕ್ಕೆ ತಂದಾಗ, ವಿಧಿ ಇಲ್ಲದೇ ಭೀಷ್ಮಾಚಾರ್ಯರು ಶಸ್ತ್ರತ್ಯಾಗ ಮಾಡಿ ಯುದ್ದದಿಂದ ವಿಮುಕ್ತರಾಗುತ್ತಾರೆ. ಯುದ್ಧದಲ್ಲಿ ಬಾಣಗಳಿಂದ ಜರ್ಜರಿತರಾಗಿದ್ದರೂ ಉತ್ತರಾಯಣ ಪುಣ್ಯಕಾಲದಲ್ಲಿ ದೇಹತ್ಯಾಗ ಮಾಡಲು ಇಚ್ಚಿಸಿದ ಕಾರಣ, ಶ್ರೀ ಕೃಷ್ಣನ ಸಲಹೆಯಂತೆ, ಅರ್ಜುನನು ಬಾಣಗಳಿಂದ ಹಾಸಿಗೆಯಂತೆ ಮಾಡಿ ಅವರನ್ನು ಶರಶಯ್ಯೆಯಲ್ಲಿ ಮಲಗಿಸುತ್ತಾನಲ್ಲದೇ ಕುಡಿಯಲು ನೀರನ್ನು ಕೇಳಿದಾಗ ಆ ಸಂದರ್ಭದಲ್ಲಿ ಮತ್ತೆ ಶ್ರೀ ಕೃಷ್ಣನು ಅರ್ಜುನನಿಗೆ ಗಂಗಾಮಾತೆಯನ್ನೇ ಅಲ್ಲಿಗೆ ತರಲು ಸೂಚಿಸಿದಾಗ, ಅರ್ಜುನನು ನೆಲಕ್ಕೆ ಬಾಣ ಹೊಡೆದು ಗಂಗಾಜಲ ನೇರವಾಗಿ ಭೀಷ್ಮಾಚಾರ್ಯರ ಬಾಯಿಗೆ ಬೀಳುವಂತೆ ಮಾಡುತ್ತಾನೆ.

  ಕುಟುಂಬ ಎಂಬ ಪರಮ ಬಂಧನ - ಮಹಾಭಾರತ ಕಥೆ

ಹೀಗೆ ದೇಹ ತ್ಯಾಗಕ್ಕಾಗಿ ಉತ್ತರಾಯಣದ ಪುಣ್ಯಕಾಲದಲ್ಲಿ ವೀರೋಚಿತವಾದ ಮರಣವನ್ನು ಹೊಂದಲು ಶರಶಯ್ಯೆಯನ್ನು ಮಲಗಿದ್ದ ಭೀಷ್ಮಾಚಾರ್ಯರನ್ನು ನೋಡಲು ಪಾಂಡವರು ಬಂದಾಗ, ಭೀಷ್ಮಾಚಾರ್ಯರು ತ್ಯಾಗದ ಭಾವನೆಗೆ ಮೂಲವಾದ ಆಧ್ಯಾತ್ಮಿಕ ಜ್ಞಾನದ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ ಫಲವೇ, ಧರ್ಮರಾಯನಿಗೆ ಉಪದೇಶಿಸಿದ ವಿಷ್ಣುಸಹಸ್ರನಾಮ ಮತ್ತು ಇತರೇ ಧಾರ್ಮಿಕ ಉಪದೇಶಗಳು. ಶ್ರೀಕೃಷ್ಣನೇ ಪರಮಜ್ಞಾನಿಗಳಾದ ಭೀಷ್ಮರ ಮುಖಾಂತರ ಲೋಕಕ್ಕೆ ನಾನಾ ಧಾರ್ಮಿಕ ರಹಸ್ಯಗಳನ್ನು ತಿಳಿಯಪಡಿಸಿದನು ಎಂದರು ತಪ್ಪಾಗದು.

ವಿಷ್ಣು ಸಹಸ್ರನಾಮದಂತಹ ಅದ್ಭುತ ಶ್ಲೋಕವನ್ನು ನಮಗೆ ನೀಡಿದ ಭೀಷ್ಮಾಚಾರ್ಯರನ್ನು ಇದೇ ಮಕರಮಾಸದ ಮಾಘ ಶುದ್ಧ ಅಷ್ಟಮಿಯಂದೇ ತಮ್ಮ ದೇಹತ್ಯಾಗ ಮಾಡಿದ ಕಾರಣ ಈ ದಿನವನ್ನು ಭೀಷ್ಮಾಷ್ಠಮಿ ಎಂದೇ ಕರೆಯಲಾಗುತ್ತದೆ.

ಹಾಗಾಗಿ ಈ ದಿನ ತಮ್ಮ ಪಿತೃಗಳಿಗೆ ಕನಿಷ್ಮ ಪಕ್ಷ ನೀರಿನಿಂದಲಾದರೂ ತರ್ಪಣವನ್ನು ಕೊಟ್ಟಲ್ಲಿ ಸಂತಾನ ಅಭಿವೃದ್ಧಿಯಾಗುವುದಲ್ಲದೇ, ತಮ್ಮ ಇಡೀ ಕುಟುಂಬಕ್ಕೆ ಶೇಯಸ್ಕರ ಎಂದು ಈ ಶ್ಲೋಕದಲ್ಲಿ ವಿವರಿಸಲಾಗಿದೆ.

ಮಾಘೇ ಮಾಸಿ ಸಿತಾಷ್ಟಮ್ಯಾಂ ಸಲಿಲಂ ಭೀಷ್ಮವರ್ಮಣೇ!
ಶ್ರಾದ್ಧಂ ಚ ಯೇ ನರಾಃ ಕುರ್ಯುಃ ತೇ ಸ್ಯುಃ ಸಂತತಿಭಾಗಿನಃ

ಅದೇ ರೀತಿ ಭೀಷ್ಮ ತರ್ಪಣ ಕೊಡದಿದ್ದಲ್ಲಿ ವರ್ಷವಿಡೀ ಮಾಡಿದ ಪುಣ್ಯಗಳು ನಾಶವಾಗುತ್ತದೆ ಎಂದು ಈ ಶ್ಲೋಕ ಹೇಳುತ್ತದೆ.

ಬ್ರಾಹ್ಮಣಾದ್ಯಾಶ್ಚ ಯೇ ವರ್ಣಾಃ ದದ್ಯುಃ ಭೀಷ್ಮಾಯ ನೋ ಜಲಂ |
ಸಂವತ್ಸರಕೃತಂ ತೇಷಾಂ ಪುಣ್ಯಂ ನಶ್ಯತಿ ಸತ್ತಮ ||

ತರ್ಪಣ ಕೊಡುವ ವಿಧಾನ
ತಂದೆ ಇರದವರು ಜನಿವಾರವನ್ನು ಪ್ರಾಚೀನವೀತಿ (ಎಡಕ್ಕೆ ಹಾಕಿಕೊಂಡು) ಮೂರು ಬಾರಿ ಈ ಮಂತ್ರವನ್ನು ಹೇಳಿಕೊಂಡು ತರ್ಪಣವನ್ನು ಕೊಡಬೇಕು.

ತಂದೆ ತಾಯಿ ಇದ್ದವರು ಜನಿವಾರವನ್ನು ಎಡ ಹೆಬ್ಬೆರಳಿಗೆ ಸಿಕ್ಕಿಸಿಕೊಂಡು ಪೂರ್ವಾಭಿಮುಖವಾಗಿ ಕುಳಿತು ಮೂರು ಬಾರಿ ಕೇವಲ ನೀರಿನಿಂದ ತರ್ಪಣವನ್ನು ಕೊಡಬೇಕು.

ಭೀಷ್ಮಃಶಾಂತನವೊ ವೀರಃ ಸತ್ಯವಾದೀ ಜಿತೇಂದ್ರಿಯಃ |
ಆಭಿರದ್ಭಿರವಾಪ್ನೋತಿ ಪುತ್ರಪೌತ್ರೋಚಿತಾಂ ಕ್ರಿಯಾಂ |
ವೈಯಾಘ್ರಪಾದಗೋತ್ರಾಯ ಸಾಂಕೃತಿಪ್ರವರಾಯ ಚ |
ಅಪುತ್ರಾಯ ದದಾಮ್ಯೇತಜ್ಜಲಂ ಭೀಷ್ಮಾಯ ವರ್ಮಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮರ್ಘ್ಯಮ್ ||
ವಸೂನಾಮವತಾರಾಯ ಶಂತನೋರಾತ್ಮಜಾಯ ಚ |
ಅರ್ಘ್ಯಂ ದದಾಮಿ ಭೀಷ್ಮಾಯ ಆಬಾಲಬ್ರಹ್ಮಚಾರಿಣೇ |
ಗಂಗಾಪುತ್ರಾಯ ಭೀಷ್ಮಾಯ ಇದಮಸ್ತು ತಿಲೋದಕಮ್ |

ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಬೋಧಿಸಿದ ವಿಷ್ಣು ಸಹಸ್ರನಾಮವನ್ನು ಹೇಗೆ ದಾಖಲಿಸಲಾಯಿತು ? ಎಂಬುದನ್ನು ಕಂಚಿಯ ಮಹಾ ಪೆರೆಯವರ್ ಎಂದೇ ಪ್ರಖ್ಯಾತರಾಗಿದ್ದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮಿಗಳು ಅದ್ಭುತವಾಗಿ ವಿವರಿಸಿದ್ದಾರೆ.

  ನಾನು ಎಂಬ ಅಹಂಕಾರದ ಕಥೆ

50 ರ ದಶಕದಲ್ಲಿ ಕಂಚಿ ಜಗದ್ಗುರುಗಳನ್ನು ಸಂದರ್ಶಿಸುತ್ತಿದ್ದವರೊಬ್ಬರು ಟೇಪ್ ರೆಕಾರ್ಡರ್ ಬಳಸುತ್ತಿದ್ದದ್ದನ್ನು ಗಮಿಸಿದ ಸ್ವಾಮಿಗಳು, ಜಗತ್ತಿನ ಅತ್ಯಂತ ಹಳೆಯ ಟೇಪ್ ರೆಕಾರ್ಡರ್ ಯಾವುದು ಎಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಯಾರಿಂದಲೂ ಉತ್ತರ ಬಾರದಿದ್ದಾಗ, ವಿಷ್ಣು ಸಹಸ್ರನಾಮವು ನಮಗೆ ಹೇಗೆ ಲಭ್ಯವಾಯಿತು? ಎಂದಾಗ ಅಲ್ಲಿದ್ದವರೊಬ್ಬರು. ಭೀಷ್ಮ ಪಿತಾಮಹರಿಂದ ವಿಷ್ಣು ಸಹಸ್ರನಾಮ ಉಪದೇಶಿಸಲ್ಪಟ್ಟಿತು ಎಂದು ತಿಳಿಸಿದಾಗ ಸಂತೋಷಗೊಂಡ ಸ್ವಾಮಿಗಳು, ಯುದ್ಧಭೂಮಿಯಲ್ಲಿ ಎಲ್ಲರೂ ಭೀಷ್ಮರ ಮಾತುಗಳನ್ನು ಆಲಿಸುತ್ತಿರುವಾಗ ಅದನ್ನು ಬರೆದುಕೊಂಡವರು ಯಾರು ? ಎಂದು ಪ್ರಶ್ನಿಸಿದಾಗ ಎಲ್ಲರೂ ಮೌನಕ್ಕೆ ಜಾರುತ್ತಾರೆ.

ಆಗ ತಮ್ಮ ಮಾತನ್ನು ಮುಂದಿವರೆಸಿದ ಶ್ರೀಗಳು.

ಭೀಷ್ಮ ಪಿತಾಮಹರು ಸಹಸ್ರನಾಮದೊಂದಿಗೆ ಶ್ರಿ ಕೃಷ್ಣನನ್ನು ವೈಭವೀಕರಿಸುತ್ತಿದ್ದಾಗ, ಪಾಂಡವರು, ಶ್ರೀಕೃಷ್ಣ ಮತ್ತು ವೇದವ್ಯಾಸರು ಸೇರಿದಂತೆ ಎಲ್ಲರ ಚಿತ್ತ ಅವರತ್ತವೇ ಇತ್ತು. ಭೀಷ್ಮರು 1000 ನಾಮಗಳನ್ನು ಮುಗಿಸಿದ ನಂತರ ಎಲ್ಲರೂ ಕಣ್ಣು ತೆರೆದಾದ ಕೂಡಲೇ ಧರ್ಮರಾಯನು, ಪಿತಾಮಹರು ವಾಸುದೇವನ 1000 ಅದ್ಭುತವಾದ ನಾಮಗಳನ್ನು ಜಪಿಸಿ ನಮ್ಮನ್ನೆರನ್ನೂ ಪಾವನ ಮಾಡಿದ್ದಾರಾದರೂ ಅದನ್ನು ಕೇಳುವ ಭರದಲ್ಲಿ ಅದನ್ನು ನಾವ್ಯಾರೂ ದಾಖಲೆಯೇ ಮಾಡಿಕೊಳ್ಳಲಿಲ್ಲವಲ್ಲಾ | ಎಂದು ಚಿಂತಾಕ್ರಾಂತನಾಗಿ ಶ್ರೀಕೃಷ್ಣನ ಕಡೆಗೆ ತಿರುಗಿ ಅವನ ಸಹಾಯವನ್ನು ಕೋರುತ್ತಾರೆ.

ಆಗ ಶ್ರೀ ಕೃಷ್ಣನೂ ಸಹಾ, “ನಾನೂ ಕೂಡಾ ನಿಮ್ಮಂತೆಯೇ ಅದನ್ನೇ ಕೇಳುವುದರಲ್ಲಿ ತಲ್ಲೀನರಾಗಿದ್ದ ಕಾರಣ ಅವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲಾಗಲಿಲ್ಲ. ಆದರೆ, ಸಹದೇವ ಮತ್ತು ವ್ಯಾಸರ ಸಹಾಯದಿಂದ ಸಂಪೂರ್ಣವಾಗಿ ಮರಳಿ ಪಡೆಯಬಹುದಾಗಿದೆ’ ಎಂದಾಗ ಎಲ್ಲರ ಮುಖದಲ್ಲಿ ಮಂದಹಾಸ ಮೂಡುತ್ತದೆ.

ನಮ್ಮೆಲ್ಲರಲ್ಲಿ ಸಹದೇವನೊಬ್ಬನು ಮಾತ್ರವೇ ಶುದ್ಧ ಸ್ಫಟಿಕವನ್ನು ಧರಿಸಿರುವ ಕಾರಣ ಅವನು ಶುದ್ಧಮನಸ್ಸಿನಿಂದ ಶಿವನನ್ನು ಪ್ರಾರ್ಥಿಸುತ್ತಾ ಧ್ಯಾನವನ್ನು ಮಾಡಿದರೆ, ಶಿವನ ಅನುಗ್ರಹದಿಂದ ಸ್ಫಟಿಕವನ್ನು ಶಬ್ದದ ಅಲೆಗಳಾಗಿ ಪರಿವರ್ತಿಸಬಹುದು ಮತ್ತು ವ್ಯಾಸರು ಅದನ್ನು ಬರೆದು ಕೊಳ್ಳಬಹುದು ಎಂದು ಶ್ರೀ ಕೃಷ್ಣನು ತಿಳಿಸುತ್ತಾನೆ. ಆಗ ಸಹದೇವ ಮತ್ತು ವ್ಯಾಸ ಇಬ್ಬರೂ ವಿಷ್ಣುಸಹಸ್ರನಾಮವನ್ನು ಪಠಿಸಿದ ಭೀಷ್ಮ ಪಿತಾಮಹನ ಕೆಳಗೆ ಒಂದೇ ಸ್ಥಳದಲ್ಲಿ ಕುಳಿತುಕೊಂಡಿದ್ದಲ್ಲದೇ, ಸ್ಫಟಿಕದಿಂದ ಧ್ವನಿ ತರಂಗಗಳನ್ನು ಪಡೆದುಕೊಳ್ಳುವ ಸಲುವಾಗಿ ಸಹದೇವನು ಶಿವನ ಕುರಿತು ಧ್ಯಾನವನ್ನು ಮಾಡಲು ಪ್ರಾರಂಭಿಸಿದನು.

  ಕರ್ಪೂರದ ಮಹತ್ವ

ಶ್ವೇತಾಂಬರ ಮತ್ತು ಸ್ಫಟಿಕನಾದ ಮಹೇಶ್ವರನ ಸರಿಯಾದ ಧ್ಯಾನದಿಂದ ಹಿಂತಿರುಗಬಹುದಾದ ಶಾಂತ ವಾತಾವರಣದಲ್ಲಿ ಶಬ್ದಗಳನ್ನು ಸೆರೆಹಿಡಿಯುವುದು ಸ್ಫಟಿಕ ಸ್ವರೂಪವಾಗಿರುವ ಕಾರಣ, ಭೀಷ್ಮಾಚಾರ್ಯರು ಬೋಧಿಸಿದ ಅದ್ಭುತವಾದ ವಿಷ್ಣುಸಹಸ್ರನಾಮವನ್ನು ಸಂಪೂರ್ಣವಾಗಿ ದಾಖಲು ಮಾಡಿಕೊಳ್ಳಲು ಸಾಧ್ಯವಾಗಿರುವ ಕಾರಣ ಈ ಸ್ಫಟಿಕವೇ ಪ್ರಪಂಚದ ಮೊತ್ತ ಮೊದಲ ಟೇಪ್ ರೆಕಾರ್ಡರ್ ಆಗಿದೆ ಎಂದು ಶ್ರೀಗಳು ಹೇಳಿದಾಗ ಅಲ್ಲಿ ಕುಳಿತಿದ್ದವರೆಲ್ಲರು ಅಚ್ಚರಿಗೊಂಡರು. ಹೀಗೆ ಸ್ಫಟಿಕ ಧ್ವನಿಮುದ್ರಣದಿಂದ ವೇದವ್ಯಾಸರ ಮೂಲಕ ವಿಷ್ಣುಸಹಸ್ರನಾಮವು ಗ್ರಂಥರೂಪದಲ್ಲಿ ಈ ಲೋಕಕ್ಕೆ ಸಮರ್ಪಣೆಯಾಯಿತು.

ಭಗವಂತನನ್ನು ತಲುಪಲು ಪ್ರಾರ್ಥನೆಯೇ ಮುಖ್ಯವಾಹಿನಿಯಾಗಿರುವ ಕಾರಣ, ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಒಳ್ಳೆಯತನ, ಆನಂದ ಮತ್ತು ಶಾಂತಿ ದೊರೆಯುವುದಲ್ಲದೇ, ಖಂಡಿತವಾಗಿಯೂ ಭಗವಂತನ ಕೃಪಾಶೀರ್ವಾದ ದೊರಕುತ್ತದೆ.

ಸ್ತ್ರೋತ, ಮಂತ್ರಗಳು ಮತ್ತು ಶ್ಲೋಕಗಳ ಪ್ರತೀ ಪದಗಳನ್ನು ಸರಿಯಾದ ಉಚ್ಚಾರದೊಂದಿಗೆ ಪಠಿಸಿದಾಗ, ಮನಸ್ಸಿನ ಏಕಾಗ್ರತೆ ಹೆಚ್ಚಾಗಿ ಜೀವನದಲ್ಲಿ ಗಮನವನ್ನು ಕೇಂದ್ರೀಕರಿಸಲು ನಮಗೆ ಸಹಾಯ ಮಾಡುತ್ತದಲ್ಲದೇ, ಪ್ರತೀ ಪದವನ್ನು ಸರಿಯಾಗಿ ಉಚ್ಚರಿಸಿದಾಗ ಅದರಿಂದ ಉಂಟಾಗುವ ತರಂಗಗಳು ದೇಹದ ಅತ್ಯಂತ ಚಿಕ್ಕ ಜೀವಕೋಶಗಳನ್ನು ಉತ್ತೇಜಿಸುತ್ತದೆ ಮತ್ತು ನಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ, ಒತ್ತಡ ಮತ್ತು ಅನಾರೋಗ್ಯದಿಂದ ಮುಕ್ತಗೊಳಿಸಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ವಿಷ್ಣು ಸಹಸ್ರನಾಮವನ್ನು ನಿಯಮಿತವಾಗಿ ಪಠಣ ಮಾಡುವುದರಿಂದಾಗಲೀ ಅಥವಾ ಕನಿಷ್ಟ ಪಕ್ಷ ಪ್ರತಿ ದಿನವೂ ಕೇಳುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಅದೇ ರೀತಿ ವಿಷ್ಣು ಸಹಸ್ರನಾಮವನ್ನು ನಿರಂತರವಾಗಿ ಪಠಿಸುವುದರಿಂದ ಜನನ, ಮರಣ ಮತ್ತು ಪುನರ್ಜನ್ಮದ ಕೆಟ್ಟ ಚಕ್ರದಿಂದ ಜನರನ್ನು ಮುಕ್ತಗೊಳಿಸುವುದಲ್ಲದೇ ಮರಣದ ನಂತರ ನೇರವಾಗಿ ವೈಕುಂಠಕ್ಕೆ ಹೋಗುತ್ತಾರೆ ಎಂದೇ ನಂಬಲಾಗಿದೆ.

ಇಂತಹ ಅದ್ಭುತವಾದ ವಿಷ್ಣು ಸಹಸ್ರನಾಮವನ್ನು ನಮಗೆ ನೀಡಿದ ಶ್ರೀ ಭೀಷ್ಮಾಚಾರ್ಯರನ್ನು ಅವರು ದೇಹತ್ಯಾಗ ಮಾಡಿದ ದಿನದಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಅಲ್ಲವೇ…?

Leave a Reply

Your email address will not be published. Required fields are marked *

Translate »