ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ಆದಿಶೇಷ ನಾಗ ಹುಟ್ಟಿನ ಕಥೆ

ಶೇಷಶಯನ ಆದಿಶೇಷ :-

ಶ್ರೀಮಹಾವಿಷ್ಣುವು, ಲಕ್ಷ್ಮೀದೇವಿ ಜೊತೆಯಲ್ಲಿ ಆದಿಶೇಷನ ಮೇಲೆ ಯೋಗನಿದ್ರಾ ಭಂಗಿಯಲ್ಲಿ ಪವಡಿಸಿರುತ್ತಾನೆ. ಆದ್ದರಿಂದ ವಿಷ್ಣುವನ್ನು ‘ಅನಂತಶಯನ’ ಎಂದು ಕರೆಯುತ್ತಾರೆ. ಹಾಗೆಯೇ ಸಾವಿರ ಹೆಡೆಯ ವಿಷಪೂರಿತ ಸರ್ಪ ಶೇಷನ ಮೇಲೆ ಶಾಂತಚಿತ್ತನಾಗಿ ಮಲಗಿ ವಿಶ್ರಾಂತಿ ಪಡೆಯುವುದು ವಿಷ್ಣುವಿಗೆ ಮಾತ್ರ ಸಾಧ್ಯ. ಶ್ಲೋಕದಲ್ಲಿ ‘ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ’ ಎಂದು ಪಠಿಸುತ್ತಾರೆ. ‘ಶೇಷ’ ಅಂದರೆ ಕೊನೆಯಿಲ್ಲದ ಎಂಬ ಅರ್ಥ ಬರುತ್ತದೆ. ಪ್ರಳಯ ಕಾಲಗಳಲ್ಲೂ ಅಂತ್ಯವಾಗದೆ ಕೊನೆಯದಾಗಿ ‘ಶೇಷ’ ಇರುತ್ತಾನೆ. ‌ಪುರಾಣಗಳ ಪ್ರಕಾರ ಮಹಾವಿಷ್ಣು ಸೃಷ್ಟಿಕರ್ತ. ವಿಷ್ಣುವಿಗೆ ಎರಡು ರೂಪವಿದೆ ಎನ್ನಲಾಗಿದೆ. ಮಂದಸ್ಮಿತನಾಗಿ ಸದಾ ಮುಗುಳ್ನಗೆ ನಗುತ್ತಾ ತನ್ನ ಭಕ್ತರಿಗೆ ಅಭಯವಿತ್ತು ಅನುಗ್ರಹಿಸುತ್ತಿರುವ ಸುಂದರ ಮುಖ. ಇನ್ನೊಂದು ರಾಕ್ಷಸರನ್ನು ಸಂಹರಿಸಲು ಉಪಾಯವಾಗಿ ಅವರನ್ನು ಹೆಣೆಯುವ ತಂತ್ರಗಾರಿಕೆಯಿಂದ ಕೂಡಿದ ವಿಷ್ಣುವಿನ ಮುಖ ರಾಕ್ಷಸರ ಎದೆಯಲ್ಲಿ ನಡುಕ ಹುಟ್ಟಿಸುವಂತಿರುತ್ತದೆ.

‘ಮಹಾವಿಷ್ಣು’ ಸದಾಕಾಲವು ತಣ್ಣಗೆ ಕೊರೆಯುವ ವಿಷಸರ್ಪ ಶೇಷನಾಗನ ಸಾವಿರ ಹೆಡೆಯ ಹಾಸಿಗೆ ಮೇಲೆ ವಿಶ್ರಾಂತಿ ಪಡೆಯುವುದರ ಹಿನ್ನೆಲೆ, ಮನುಷ್ಯನಾಗಿ ಹುಟ್ಟುವ ಪ್ರತಿ ಮಗುವು ಯುವಕರಾಗುತ್ತಿದ್ದಂತೆ ಬಹಳಷ್ಟು ಜವಾಬ್ದಾರಿಗೆ ಒಳಪಡುತ್ತಾರೆ. ಕುಟುಂಬ, ಸಮಾಜ, ಆರ್ಥಿಕ ಪರಿಸ್ಥಿತಿ, ಮುಂತಾದ ಜವಾಬ್ದಾರಿಯನ್ನು ನಿರ್ವಹಿಸುವಾಗ ಅನೇಕ, ಚಿಂತೆ, ಸಮಸ್ಯೆ ಕಷ್ಟಗಳನ್ನು ಎದುರಾಗುತ್ತದೆ. ಸರ್ಪದಂತೆ ಬುಸುಗುಡುತ್ತಾ ವಿಷಮದಂಥೆ ಬರುವ ಸಮಸ್ಯೆಗಳನ್ನು ಮತ್ತು ಕಷ್ಟಗಳನ್ನು ಸಮಾಧಾನದಿಂದ ಎದುರಿಸಬೇಕೆಂದು ಮತ್ತು ಶಾಂತಚಿತ್ತರಾಗಿ, ಕರ್ತವ್ಯವೇ ದೇವರೆಂದು ತಿಳಿದು ತಾಳ್ಮೆಯಿಂದ ಹೇಗೆ ಇರಬೇಕು ಎಂಬುದಕ್ಕೆ, ಏನೂ ಮಾಡೆ ಇಲ್ಲ ಎಂಬಂತೆ ತಲೆಗೆ ಕೈ ಕೊಟ್ಟು, ನಿಡಿದಾಗಿ ಕಾಲುಚಾಚಿ, ಪ್ರಶಾಂತವಾಗಿ, ಆದಿಶೇಷನ ಮೇಲೆ ಪವಡಿಸುವ ‌ ಮೂಲಕ ಶಾಂತರೀತಿಯಿಂದ ಹೇಗೆ ಬದುಕಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾನೆ.

ನಮ್ಮ ಹಿಂದೂ ಗ್ರಂಥಗಳಲ್ಲಿ ನಾಗಗಳಿಗೆ ವಿಶೇಷ ಸ್ಥಾನವನ್ನು ಕೊಟ್ಟಿದ್ದಾರೆ ಅದರಂತೆ ಧರ್ಮಗ್ರಂಥಗಳಲ್ಲಿ ವಾಸುಕಿ, ಶೇಷ, ಪದ್ಮನಾಭ ,ಕಾರ್ಕೋಟಕ, ಕಾಲಿಯಾ, ಮುಂತಾದ ಸರ್ಪಗಳ ಕುರಿತು ವರ್ಣಿಸಿದ್ದಾರೆ. ಶೇಷನಾಗನನ್ನು ಆದಿಶೇಷ ಎಂದು ಕರೆಯುತ್ತಾರೆ. ಆದಿಶೇಷ ಸರ್ಪಗಳ ರಾಜ, ಪುರಾಣಗಳ ಪ್ರಕಾರ ದಕ್ಷಪ್ರಜಾಪತಿಯ ಮಕ್ಕಳಾದ ಕದ್ರು ಮತ್ತು ವಿನುತಾಳನ್ನು ಕಶ್ಯಪ ಮಹರ್ಷಿಗೆ ಕೊಟ್ಟು ವಿವಾಹ ಮಾಡುತ್ತಾರೆ. ಮುಂದೆ ಕಶ್ಯಪರು ತಮ್ಮ ಪತ್ನಿಯರ ಸೇವೆಯಿಂದ ಪ್ರಸನ್ನರಾಗಿ ಇಬ್ಬರಿಗೂ ಬೇಕಾದ ವರ ಕೇಳುವಂತೆ ಹೇಳುತ್ತಾರೆ. ಎಲ್ಲರಿಗೂ ಸಮಾನ ಶಕ್ತಿ ಇರುವ 1000 ನಾಗಗಳ ಪುತ್ರಸಂತಾನ ಬೇಕೆಂದು ಕದ್ರು ಕೇಳಿದಳು. ಅದೇ ರೀತಿ ವಿನುತ, ಬುದ್ಧಿ, ಶಕ್ತಿ, ತೇಜಸ್ಸು ಕದ್ರುವಿನ ಸಾವಿರ ಮಕ್ಕಳಿಗಿಂತ ಪರಾಕ್ರಮದಲ್ಲಿ, ಶ್ರೇಷ್ಠವಾದ ಎರಡು ಮಕ್ಕಳು ಬೇಕು ಎಂದು ವಿನುತ ಕೇಳಿದಳು. ಅವರಿಬ್ಬರ ಇಚ್ಛೆಯಂತೆಯೇ ವರ ಕೊಟ್ಟು ಕಶ್ಯಪರು ತಪಸ್ಸಿಗೆ ಹೋಗುತ್ತಾರೆ. ಸ್ವಲ್ಪ ದಿನಗಳ ನಂತರ ಕದ್ರು ಸಾವಿರ ಮೊಟ್ಟೆಗಳನ್ನು ಕೊಟ್ಟರೆ, ವಿನುತ ಎರಡು ಮೊಟ್ಟೆಗಳನ್ನು ಕೊಟ್ಟಳು. ದಾಸಿಯರು ಅವುಗಳನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಜೋಪಾನ ಮಾಡಿದರು. ಐದು ನೂರು ವರ್ಷಗಳ ನಂತರ ಕದ್ರುವಿನ ಸಾವಿರ ಮೊಟ್ಟೆಗಳಿಂದ ‌ ನಾಗನ ಮರಿಗಳು ಹೊರಬಂದವು.

  ಓಂಕಾರ ಎಲ್ಲಾ ಮಂತ್ರಗಳ ರಾಜ

ವಿನುತಳ ಎರಡು ಮೊಟ್ಟೆಗಳಲ್ಲೂ ಮಕ್ಕಳು ಬರಲಿಲ್ಲ ಬೇಸರಗೊಂಡ ಅವಳು ತನ್ನ ಕೈಯಿಂದ ಒಂದು ಮೊಟ್ಟೆಯನ್ನು ಒಡೆದಳು. ಅದರಿಂದ ಒಬ್ಬ ಪುತ್ರನು ಹೊರ ಬಂದನು. ಆದರೆ ಅವನ ದೇಹದ ಮೇಲಿನ ಭಾಗ ಬೆಳೆದಿದ್ದು ಸೊಂಟದಿಂದ ಕೆಳಗಿನ ಭಾಗ ಬೆಳೆದಿರಲಿಲ್ಲ. ಇದರಿಂದ ಬೇಸರಗೊಂಡ ಅವನು ಅಮ್ಮ ನೀನು ಆತುರದಿಂದ ಮೊಟ್ಟೆ ಒಡೆದು ನನ್ನನ್ನು ಅರ್ಧಭಾಗ ಮಾಡಿಬಿಟ್ಟೆ. ಆದ್ದರಿಂದ ನೀನು ಐದು ನೂರು ವರ್ಷಗಳ ಕಾಲ ಕದ್ರುವಿನ ದಾಸಿಯಾಗಿರು ಎಂದು ಶಾಪ ಕೊಟ್ಟನು. ನಂತರ ಅವನಿಗೆ ಪಶ್ಚಾತ್ತಾಪವಾಗಿ ಅಮ್ಮ ಕ್ಷಮಿಸು ನನ್ನನ್ನು, ಇನ್ನೊಂದು ಮೊಟ್ಟೆ ಒಡೆದರೆ ಒಬ್ಬ ಮಗ ಬರುತ್ತಾನೆ. ಆ ಮಗನಿಂದ ನಿನಗೆ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಆಕಾಶಕ್ಕೆ ಹಾರಿ ಹೋದನು. ಮುಂದೆ ‘ಅರುಣ’ ಎಂಬ ಹೆಸರಿನಿಂದ ಸೂರ್ಯದೇವನ ರಥಕ್ಕೆ ಸಾರಥಿ ಯಾಗುತ್ತಾನೆ.

  ಭಕ್ತಿಯೆಂದರೇನು ? ಭಕ್ತಿಯ 9 ರೂಪಗಳಾವುವು ?

ಶೇಷನಾಗನನ್ನು ಆದಿಶೇಷ ಎಂದು ಕರೆಯುತ್ತಾರೆ. ಕದ್ರುವಿನ ಮಕ್ಕಳಲ್ಲಿ ಮೊದಲನೆಯವನೆ ಶೇಷನಾಗ. ಇವನ ಉಳಿದ ಸಹೋದರರು ಅವರಿವರಿಗೆ, ಕೀಟಲೆ, ಹಿಂಸೆ, ಮಾಡುತ್ತಿದ್ದರು. ಇದು ಶೇಷನಾಗನಿಗೆ ಇಷ್ಟವಾಗಲಿಲ್ಲ. ಬೇಸತ್ತ ಅವನು ಕುಟುಂಬವನ್ನು ತೊರೆದು, ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾ ಗಾಳಿಯಲ್ಲಿ ವಾಸಿಸಲು ಆರಂಭಿಸುತ್ತಾನೆ. ಮುಂದೆ ಬ್ರಹ್ಮನ ಆಜ್ಞೆಯಂತೆ ಪೃಥ್ವಿಯನ್ನು ತನ್ನ ತಲೆಯ ಮೇಲೆ ಹೊತ್ತು ರಕ್ಷಿಸ ತೊಡಗಿದನು.
ಆದಿಶೇಷನಿಗೆ ಗ್ರಹಗಳನ್ನು ಒಳಗೊಂಡ ‌ ಇಡೀ ಬ್ರಹ್ಮಾಂಡವನ್ನು ಹಿಡಿದಿಟ್ಟು ಕೊಂಡಿರುವ ವಿಶೇಷ ಗುರುತ್ವಾಕರ್ಷಣ ಶಕ್ತಿ ಇದ್ದು ಗ್ರಹಗತಿಗಳು ಆಯಾ ಸ್ಥಾನದಲ್ಲಿರುವಂತೆ ಹಿಡಿದಿದ್ದಾನೆ. ಬ್ರಹ್ಮಾಂಡದ ಮೂಲವೆ ಮಹಾವಿಷ್ಣು.
ಇಂತಹ ಮಹಾವಿಷ್ಣುವಿನ ನಿಷ್ಠಾವಂತನು ಆದಿಶೇಷ. ರಾಮಾಯಣದಲ್ಲಿ ಆದಿಶೇಷನೆ ರಾಮನ ಸಹೋದರ ಲಕ್ಷ್ಮಣನಾಗಿಯು, ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅಣ್ಣ ಬಲರಾಮನಾಗಿದ್ದನು.

ಹಿಂದೂಗಳಲ್ಲಿ ನಾಗಗಳಿಗೆ ಅಗ್ರಸ್ಥಾನವಿದ್ದು ವಿಶೇಷ ಪೂಜೆ, ವ್ರತ – ಕಥೆ, ನೇಮ- ನಿಷ್ಠೆ , ಉಪವಾಸ ಆಚರಿಸುತ್ತಾರೆ. ಕುಟುಂಬದಲ್ಲಿ ಗಂಡ ಹೆಂಡತಿ ಮಕ್ಕಳು, ಪಶು, ಪ್ರಾಣಿ, ಸಂಪತ್ತು ಚೆನ್ನಾಗಿರಲೆಂದು, ಶ್ರದ್ಧಾ -ಭಕ್ತಿ, ಹಾಗೂ ಶುದ್ಧ ಮಡಿಯಿಂದ ನಡೆದುಕೊಳ್ಳುತ್ತಾರೆ.‌ ನಾಗರ ಪಂಚಮಿ, ಶ್ರೆಷ್ಟಿ ಇಂತಹ ದಿನಗಳಲ್ಲಿ ಶ್ರದ್ಧೆಯಿಂದ ಆರಾದಿಸುತ್ತಾರೆ. ಹರಕೆ- ವಿಶೇಷ ಪೂಜೆ-ಮನೆದೇವರು, ಎಂಬ, ಭಯ ಭಕ್ತಿಯಿಂದ ಪವಿತ್ರ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಮಣ್ಯ, ನಾಗಲಮಡಿಕೆ, ಮುಂತಾದ ಪುಣ್ಯ ಕ್ಷೇತ್ರಗಳಿಗೆ ಕುಟುಂಬ ಸಮೇತ ಹೋಗಿ ಸೇವೆ ಸಲ್ಲಿಸಿ ಬರುತ್ತಾರೆ. ಇಂದಿಗೂ ಹಳ್ಳಿಗಳಲ್ಲಿ ಮನೆಯ ಹಿಂಭಾಗದ ಅಶ್ವತ್ಥಮರದ ‌ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಿ ನಾಗರಕಟ್ಟೆಗೆ ವಿಶೇಷ ದಿನಗಳಲ್ಲಿ ಪೂಜೆ-ಪುನಸ್ಕಾರಗಳು, ಪ್ರದಕ್ಷಿಣೆ ನಮಸ್ಕಾರ, ಹಾಲಿನಿಂದ ಅಭಿಷೇಕ, ಕಾರ್ತಿಕ ಮಾಸದಲ್ಲಿ ದೀಪೋತ್ಸವ ಇಂತಹ ಆಚರಣೆಗಳನ್ನು ಮಾಡುತ್ತಿರುತ್ತಾರೆ. ಸರ್ಪಗಳು ನಿಧಿಯನ್ನು ಕಾಯುತ್ತವೆ ಎಂದು ಹೇಳುತ್ತಾರೆ. ಕೇರಳದ ಪ್ರಸಿದ್ಧ ಅನಂತಪದ್ಮನಾಭ ದೇವಸ್ಥಾನ ಪೂರಕವಾಗಿದೆ ಎನ್ನಬಹುದು.

  ವಿಭೂತಿಯನ್ನು ಹಣೆಗೆ ಏಕೆ ಹಚ್ಚಿಕೊಳ್ಳಲಾಗುತ್ತದೆ

(ನಾನು ಚಿಕ್ಕಂದಿನಲ್ಲಿ ಕದ್ರು ಮತ್ತು ವಿನುತಾಳ ಕುರಿತು ಈ ಕುತೂಹಲದ ಕತೆಯನ್ನು ಕೇಳುತ್ತಿದ್ದೆ. ಕದ್ರುವಿಗೆ ಸಾವಿರ ಮಕ್ಕಳು ಆಗುತ್ತವೆ. ಆದರೆ ವಿನುತ ಎರಡು ಮೊಟ್ಟೆಯಲ್ಲಿ ಒಂದು ಮೊಟ್ಟೆ ಒಡೆದಾಗ ಹೊರಬಂದ ದೇಹ ಎರಡು ಆಗಿರುತ್ತದೆ. ಸ್ವಲ್ಪ ದಿನ ಬಿಟ್ಟು ಇನ್ನೊಂದು ಮೊಟ್ಟೆ ತಾನೆ ಒಡೆದು ಗರುಡ ಪಕ್ಷಿ ಬಂದು ಅವಳ ಮುಂದೆ ನಿಲ್ಲುತ್ತದೆ. ಇದನ್ನು ನೋಡಿದ ವಿನುತ ಬೇಸರ, ಹಾಗೂ ಸಿಟ್ಟಿನಿಂದ, “ಒಂದು ಕಂಚಾಯಿತು, ಒಂದು ಮಿಂಚಾಯಿತು, ಮುಂದೆ ಬಂದೆಯಾ ಮುದಿ ಪಕ್ಷಿಯೇ” ಎಂದು ಅಳುತ್ತಾಳೆ. ಆಗ ಪಕ್ಷಿಯು ಅಮ್ಮ ಅಳಬೇಡ ನಾನು ಪಕ್ಷಿ ಆಗಿರಬಹುದು. ಮುಂದೆ ನನ್ನ ಸಾಹಸವನ್ನು ತೋರಿಸುತ್ತೇನೆ. ಅದನ್ನು ನೋಡಿ ನೀನು ಸಂತೋಷಪಡುತ್ತಿ, ಮತ್ತು ಆಶೀರ್ವದಿಸುತ್ತೀ, ಎಂದು ಹೇಳಿ ಹಾರಿಹೋಯಿತು. ಕಂಚು,ಮಿಂಚು,ಎನ್ನುವುದು ಮಳೆಗಾಲದ ಸಮಯದಲ್ಲಿ ಆಕಾಶದಲ್ಲಿ ಬರುವ ಗುಡುಗು-ಮಿಂಚುಗಳು ವಿನುತಳ ಮಕ್ಕಳು ಎನ್ನುತ್ತಿದ್ದರು.)

          ಶ್ರೀ ನವನಾಗ ಸ್ತೋತ್ರ:- 

ಅನಂತ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ!
ಶಂಖಪಾಲಂ ದೃತರಾಷ್ಟ್ರಂ ಚ ತಕ್ಷಕಂ ಕಾಲಿಯಂ ತಥಾ!
ಏತಾನಿ ನವನಾಮಾನಿ ನಾಗನಾಮ ಚ ಮಹಾತ್ಮನಂ !
ಸಾಯಂಕಾಲೆ ಪಠೇನ್ನಿತ್ಯಂ ಪ್ರಾತಃಕಾಲೆ ವಿಶೇಷತಃ !
ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್!
ಇತಿ ಶ್ರೀ ನವನಾಗ ಸ್ತೋತ್ರಂ.

ಈ ಸ್ತೋತ್ರವನ್ನು ಯಾರು ಭಕ್ತಿಯಿಂದ ಪಠಿಸುತ್ತಾರೋ, ಸರ್ವ
ನಾಗ ದೋಷ ನಿವಾರಣಾ, ಅವರಿಗೆ. ಎಲ್ಲಾ ಕಡೆಯೂ ವಿಜಯ ಪ್ರಾಪ್ತವಾಗುತ್ತದೆ ಇಂಥವರಿಗೆ ಯಾವ ವಿಷ ಭಯವಿರುವುದಿಲ್ಲ .

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

Leave a Reply

Your email address will not be published. Required fields are marked *

Translate »