ಕೊಲ್ಲೂರು ಶ್ರೀ ಮೂಕಾಂಬಿಕೆ ಪುರಾಣ ಕಥೆ ಹಾಗೂ ಕ್ಷೇತ್ರ ಮಹಾತ್ಮೆ
“ಕೋಲ ಮಹರ್ಷಿ” ಗಳು ತಪಸ್ಸನ್ನು ಆಚರಿಸಿದ ಭೂಮಿಯೇ ಕೋಲಾಪುರ ಈಗಿನ ಕೊಲ್ಲೂರು. ಮೊದಲು ಕೋಲಾಪುರವು ದಂಡಕಾರಣ್ಯವಾಗಿತ್ತು, ಸೂರ್ಯನ ಕಿರಣವೂ ಕೂಡ ಭೂಮಿಗೆ ತಾಗುತ್ತಿರಲಿಲ್ಲ. ಒಮ್ಮೆ ಕೋಲ ಮಹರ್ಷಿಗಳ ತಪಸ್ಸಿಗೆ ಹರಿಹರರು ಪ್ರತ್ಯಕ್ಷರಾದರು. ಹರಿಹರರಲ್ಲಿ ಕೋಲ ಮಹರ್ಷಿಗಳು, “ಪ್ರಪಂಚದ ಹಿತಕ್ಕಾಗಿ ಮುಂದಿನ ಪ್ರಜೆಗಳ ಒಳಿತಿಗಾಗಿ ಏನು ಬೇಕು ಅದನ್ನು ನೀಡು” ಎಂದು ಪ್ರಾರ್ಥಿಸಿದರು. ಆಗ ಹರಿಯು ಬೋಧಿಸಿದ ಸರ್ವ ಸಾನಿಧ್ಯವಿರುವ
ಶ್ರೀ ಚಕ್ರವನ್ನು ಹರನ್ನು ತನ್ನ ಅಂಗುಷ್ಟದಲ್ಲಿ ಬರೆದು ಕೊಟ್ಟನು. ಈ
ಶ್ರೀ ಚಕ್ರವು 9 ಕೋನಗಳಿಂದ ಮಾಡಲ್ಪಟ್ಟಿದ್ದು 5 ಕೋನ ಸ್ತ್ರೀ ಭಾಗವಾಗಿ, 4 ಕೋನ ಪುರುಷ ಭಾಗವಾಗಿದೆ. ಭೂ ಪ್ರಸ್ತವಾಗಿದ್ದ ( ಸಮತಲ) ಶ್ರೀಚಕ್ರವು, ಕೋಲ ಮಹರ್ಷಿಗಳ ಆರಾಧನೆಯಿಂದ ಸಿದ್ಧಿ ಹೊಂದಿ, ಮೇರು ಪ್ರಸ್ತವಾಗಿ (ಉಬ್ಬಿದ) ಬೆಳೆಯಿತು. ಈಗ ಕೊಲ್ಲೂರಿನಲ್ಲಿ ಕಾಣಿಸಿರುವ ಸ್ವಯಂಭೂಲಿಂಗವು ಶ್ರೀಚಕ್ರದ ಬಿಂದುವಾಗಿದೆ. ಶ್ರೀಚಕ್ರದ ತೇಜಸ್ಸೇ ಸ್ವರ್ಣರೇಖೆ. ಎಡ ಭಾಗದಲ್ಲಿ ಶಕ್ತಿರೂಪಿ ಕಾಳಿ, ಲಕ್ಷ್ಮೀ, ಸರಸ್ವತಿಯರಿದ್ದು , ಬಲಭಾಗದಲ್ಲಿ ಪುರುಷರೂಪಿ ಬ್ರಹ್ಮ, ವಿಷ್ಣು, ಮಹೇಶ್ವರರಿದ್ದಾರೆ.
ಸ್ವರ್ಣ ರೇಖಾಂಕಿತಂ ಲಿಂಗಂ
ನಾಸ್ತಿ ನಾಸ್ತಿ ಜಗತ್ರಯೇ |
ವಾಮಭಾಗಾಧಿಕಂ ಲಿಂಗಂ
ನ ಭೂತೋ ನ ಭವಿಷ್ಯತಿ ||
ಸ್ವರ್ಣ ರೇಖೆಯನ್ನು ಹೊಂದಿದ ಲಿಂಗವು ಜಗತ್ತಿನ ಎಲ್ಲೆಡೆ ಸಿಗಬಹುದಾದರೂ ಎಡಭಾಗ ಅಧಿಕವಾಗಿರುವ ಲಿಂಗವು ಹಿಂದೆಯೂ ದೊರೆತಿಲ್ಲ ಮುಂದೆಯೂ ದೊರೆಯದ ಏಕೈಕ ಲಿಂಗವೇ ಕೊಲ್ಲೂರಿನ ಸ್ವಯಂಭೂಲಿಂಗ.
ದೇವಿ ಅಂಬಿಕೆಯು ಮೂಕಾಂಬಿಕೆಯಾಗಿದ್ದು ಹೇಗೆ….!?
ಅತಿ ಶಕ್ತಿಶಾಲಿಯಾದ ಕಂಹಾಸುರನು ಕೋಲಾಪುರದಲ್ಲಿ ದುರಾಡಳಿತ ನಡೆಸುತ್ತಿದ್ದ, ಪ್ರಜೆಗಳನ್ನು ಹಿಂಸಿಸುತ್ತಿದ್ದ, ದೇವತೆಗಳಿಗೂ ಉಪಟಳ ಕೊಡುತ್ತಿದ್ದ. ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ದೇವಿಯಲ್ಲಿ ತಪಸ್ಸನ್ನು ಆಚರಿಸಿ, ಯಾವುದೇ ಜೀವರಾಶಿಯಿಂದ ಮರಣ ಬರಬಾರದೆಂದು ವರವನ್ನು ಬೇಡುವ ಬಯಕೆಯಿಂದಿದ್ದನು. ಇದನ್ನರಿತ ವಾಗ್ದೇವಿಯು ಕಂಹಾಸುರನನ್ನು ಮೂಕನನ್ನಾಗಿಸಿದಳು. ಅಂದಿನಿಂದ ಕಂಹಾಸುರ ಮೂಕಾಸುರನಾದನು.
ಇದರಿಂದ ಕುಪಿತಗೊಂಡ ಮೂಕಾಸುರ, ಸೇಡು ತೀರಿಸಿಕೊಳ್ಳಲು ದೇವತೆಗಳಿಗೆ ತೊಂದರೆ ನೀಡುತ್ತಿದ್ದನು. ಈ ಕಿರುಕುಳವನ್ನು ಸಹಿಸಲಾಗದೆ ದೇವತೆಗಳು ದೇವಿಯ ಮೊರೆ ಹೋದರು. ಮೂರು ಕೋಟಿ ದೇವತೆಗಳ ಶಸ್ತ್ರಾಸ್ತ್ರ ಮತ್ತು ಶಕ್ತಿಯ ಬಲದೊಂದಿಗೆ ದೇವಿಯು ಮೂಕಾಸುರನನ್ನು ಸಂಹರಿಸಿದಳು. ಈ ಘನಘೋರ ಯುದ್ಧ ನಡೆದ ಸ್ಥಳವೇ ಈಗಿನ ಮಾರಣಕಟ್ಟೆ. ದೇವಿಯಿಂದ ಸೋತು ಶರಣಾದ ಮೂಕಾಸುರನಿಗೆ ಕೊನೆಯ ಉಸಿರಿರುವಾಗ ದೇವಿ ಅಂತಿಮ ಇಚ್ಛೆಯನ್ನು ಕೇಳಿದಳು. ಆಗ ಮೂಕಾಸುರನು, “ನಿನ್ನ ಪಾದದಲ್ಲಿ ನನ್ನನ್ನು ಐಕ್ಯವಾಗಿಸಿ, ನನ್ನ ಹೆಸರಿನಿಂದ ನೀನು ಪ್ರಖ್ಯಾತಿ ಹೊಂದಬೇಕು” ಎಂದು ಕೇಳುತ್ತಾನೆ. ಅಂದಿನಿಂದ ದೇವಿ ಅಂಬಿಕೆಯು ಮೂಕಾಂಬಿಕೆಯಾದಳು. ನಂತರ ಮೂಕಾಂಬಿಕೆಯು ಕೊಲ್ಲೂರಿನ ಶಿವಶಕ್ತ್ಯೈಕ್ಯ ಸ್ವಯಂಭೂಲಿಂಗದಲ್ಲಿ ಮುಕ್ಕೋಟಿ ದೇವತೆಗಳ ಶಕ್ತಿಯೊಂದಿಗೆ ಐಕ್ಯಳಾದಳು.
ತದನಂತರ ವೈದಿಕ ಧರ್ಮದ ಉನ್ನತಿಗಾಗಿ ವಿಶ್ವಪರ್ಯಟನೆಗೈದ ಶಂಕರಾಚಾರ್ಯರು ಲಿಂಗರೂಪದಲ್ಲಿ ಐಕ್ಯಳಾದ ದೇವಿಯ ಸಗುಣ ರೂಪವನ್ನು ನೋಡಬಯಸಿ ಕೊಡಚಾದ್ರಿಯ “ಚಿತ್ರಮೂಲ”ದಲ್ಲಿ ತಪಸ್ಸುಗೈದರು. ದೇವಿ ಸಗುಣ ರೂಪದಲ್ಲಿ ಪ್ರತ್ಯಕ್ಷವಳಾದಳು. ದೇವಿಯನ್ನು ಮೂರ್ತಿರೂಪದಲ್ಲಿ ಪ್ರತಿಷ್ಠಾಪಿಸಿದರು. ಅವರು ಹಾಕಿದ ಆಗಮಶಾಸ್ತ್ರದ ನಿಯಮದಡಿ ಇಂದಿನವರೆಗೂ ಕೊಲ್ಲೂರಿನಲ್ಲಿ ದೇವಿಯು ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುತಿದ್ದಾಳೆ.
ಮೂಲ ಸ್ವಯಂಭೂಲಿಂಗಕ್ಕೆ ಅಭಿಷೇಕ, ಅರ್ಚನೆ, ನೇವೇದ್ಯ ಹಾಗೂ ದೇವಿಯ ಮೂರ್ತಿಗೆ ಅಲಂಕಾರ ನಡೆಯುತ್ತದೆ.
ಪ್ರಸ್ತುತ ಮೂಕಾಂಬಿಕೆ ದೇವಿಗೆ ಪ್ರತಿನಿತ್ಯ ಪ್ರಾತಃಕಾಲ ಗೋದರ್ಶನದ ಮೂಲಕ ತ್ರಿಕಾಲ ಸಾತ್ತ್ವಿಕ ಪೂಜೆ ನಡೆಯುತ್ತದೆ. ನಿತ್ಯ ಅನ್ನ ನೈವೇದ್ಯ ಸೇವೆಗೆ 48 ಸೇರು ಅಕ್ಕಿಯಿಂದ ಅನ್ನ ತಯಾರಾಗುತ್ತದೆ. ಶುದ್ಧವಾಗಿ ಬೆಳೆದ ಬಿಲ್ವಪತ್ರೆ, ಕಿಸಕಾರ, ತುಳಸಿ, ಮಲ್ಲಿಗೆ, ಸಂಪಿಗೆ ಹೂವುಗಳು ನಿತ್ಯ ಅರ್ಚನೆಗೆ ಬೇಕು ಹಾಗೂ ನಿತ್ಯಬಲಿ ನಡೆಯುತ್ತದೆ. ಚಂಡಿಕಾ ಹೋಮ, ಕುಂಕುಮಾರ್ಚನೆ, ರುದ್ರಾಭಿಷೇಕ, ತುಪ್ಪದ ದೀಪ, ಅಲಂಕಾರ ಪೂಜೆ, ಮಹಾಪೂಜೆ, ವಿದ್ಯಾರಂಭ, ರಂಗಪೂಜೆ, ನಿತ್ಯ ಅನ್ನದಾನ ಸೇವೆ ನಡೆಯುತ್ತದೆ. ಕೊಲ್ಲೂರು ಮಲೆನಾಡ ಪ್ರದೇಶ, ಹಿಂದೆ ಇಲ್ಲಿನ ಜನರು ಕಷಾಯವನ್ನು ಕುಡಿಯುತ್ತಿದ್ದು, ಭಗವದ್ಗೀತೆಯ 9ನೇ ಅಧ್ಯಾಯದ 27ನೇ ಶ್ಲೋಕದಲ್ಲಿರುವಂತೆ,
“ಏನನ್ನು ಮಾಡುತ್ತಿಯೋ ಏನನ್ನು ತಿನ್ನುತ್ತೀಯೋ ಎಲ್ಲವನ್ನು ಭಗವಂತನಿಗೆ ಅರ್ಪಿಸು” ಎಂಬ ಭಾವದಿಂದ ದೇವಿಗೆ ಕಷಾಯವನ್ನರ್ಪಿಸಿ ತೀರ್ಥವಾಗಿ ಸೇವಿಸಿರುವುದೇ ಕಷಾಯ ತೀರ್ಥವಾಯಿತು. ಈಗಲೂ ಕೂಡ ರಾತ್ರಿ ಕಷಾಯ ನೈವೇದ್ಯ ಅರ್ಪಿಸಿ, ಮಹಾಮಂಗಳಾರತಿಯೊಂದಿಗೆ ಪೂಜೆಯು ಸಮಾಪ್ತಿಗೊಳ್ಳುವುದು.
ಎಲ್ಲಾ ಹಿಂದೂ ಹಬ್ಬಗಳಲ್ಲಿ ವಿಶೇಷ ಪೂಜೆಗಳು ಕೊಲ್ಲೂರಿನಲ್ಲಿ ನಡೆಯುತ್ತದೆ. ಮಹಾರಥೋತ್ಸವದಲ್ಲಿ ಏಳು ದಿನಗಳ ಕಾಲ ಕಟ್ಟೆ ಉತ್ಸವ, ವಿಶೇಷ ಅಭಿಷೇಕ, ವಿಶೇಷ ಬಲಿ, ಅಲಂಕಾರಗಳಿಂದ ನಡೆಯುತ್ತದೆ.
ನವರಾತ್ರಿಯಲ್ಲಿ ವಿಶೇಷ ಪೂಜೆಗೊಳ್ಳುವ ದೇವಿ, 9 ದಿನವೂ ಬೆಳ್ಳಿ , ಚಿನ್ನ , ವಜ್ರಗಳಿಂದ ತಯಾರಿಸಿದ ಆನೆ, ಸಿಂಹ, ನವಿಲು, ಕಮಲ, ವೃಷಭ, ಮಾತಂಗಿ, ನಾಗಾಭರಣ, ರಾಜರಾಜೇಶ್ವರಿ, ವಿವಿಧ ರೀತಿ ಅಲಂಕಾರಗೊಂಡು ಉತ್ಸವದಲ್ಲಿ ವಿಜೃಂಭಿಸುತ್ತಾಳೆ.
ಹೊರಪ್ರಕಾರದಲ್ಲಿ ಭಕ್ತರ ವಾಕ್ ದೋಷ, ಮಾಟ-ಮಂತ್ರ ದೋಷ, ದೃಷ್ಟಿದೋಷ ನಿವಾರಕ ವೀರಭದ್ರ, ಸುಬ್ರಹ್ಮಣ್ಯ, ಸರಸ್ವತಿ ಮಂಟಪ, ಪ್ರಾಣಲಿಂಗೇಶ್ವರ, ಪಾರ್ಥನಾಥೇಶ್ವರ, ಪಂಚಮುಖಿ ಗಣಪತಿ, ಚಂದ್ರಮೌಳೇಶ್ವರ, ನಂಜುಂಡೇಶ್ವರ, ಆಂಜನೇಯ, ವೆಂಕಟರಮಣ ಮತ್ತು ತುಳಸಿಕಟ್ಟೆಯೊಂದಿಗೆ ಶ್ರೀಕೃಷ್ಣ ದೇವಾಲಯವಿದೆ. ಹೀಗೆ ನಾನಾ ತರಹದ ಪೂಜೆಗಳನ್ನು ದೇಶ-ವಿದೇಶದ ಭಕ್ತರಿಂದ ಮಾಡಿಸಿಕೊಂಡು ಭಕ್ತರ ರಕ್ಷಣೆಗೆ ನೆಲೆ ನಿಂತಿದ್ದಾಳೆ ಕೊಲ್ಲೂರು ಮೂಕಾಂಬಿಕೆ.