ಸಾವಿನ ನಂತರ ಜೀವ ಎಲ್ಲಿಗೆ ಹೋಗುತ್ತದೆ? ಸ್ವರ್ಗ ನರಕಗಳು ಇರುವುದು ನಿಜವೇ?

ಸಾವಿನ ನಂತರ
(ಗರುಡ ಪುರಾಣ)…

       ಸಾವಿನ ನಂತರ ಜೀವ ಎಲ್ಲಿಗೆ ಹೋಗುತ್ತದೆ? ಸ್ವರ್ಗ ನರಕಗಳು ಇರುವುದು ನಿಜವೇ? ಇತ್ಯಾದಿ ಕುತೂಹಲ ಎಲ್ಲ ದೇಶಕಾಲಗಳ ಮನುಷ್ಯರನ್ನೂ ಕಾಡಿದೆ. ಹಾಗೆಂದೇ ಬಹುತೇಕ ಎಲ್ಲ ಮತ ಪಂಥಗಳು, ಜನಪದ – ನಾಗರಿಕತೆಗಳು ಈ ಬಗ್ಗೆ ತಮ್ಮದೇ ವಿವರಗಳನ್ನು ನೀಡಲು ಯತ್ನಿಸಿವೆ. ಅಂಥವುಗಳಲ್ಲಿ ನಮ್ಮ ಗರುಡಪುರಾಣವೂ ಒಂದು. ಈ ಲೇಖನದಲ್ಲಿ ಗರುಡಪುರಾಣದಲ್ಲಿ ಹೇಳಲಾಗಿರುವಂತೆ ಸಾವಿನ ನಂತರ ಜೀವದ ಪ್ರಯಾಣ ಮತ್ತು ಅವಸ್ಥೆಯ ಬಗ್ಗೆ ಮಾಹಿತಿ ಇದೆ. 
     ಜೀವಿಯು ಗತಿಸಿದ ಮೇಲೆ ಒಂದು ವರ್ಷದ ಪರ್ಯಂತ ಧೀರ್ಘ ಪ್ರಯಾಣ ಮಾಡಿ ಯಮಲೋಕವನ್ನು ತಲುಪುವುದು. ದಿನಕ್ಕೆ 2470 ಯೋಜನದಂತೆ 86,000 ಯೋಜನ ದೂರದಲ್ಲಿ ಯಮಲೋಕವಿದೆ. ದೇಹ ತ್ಯಜಿಸಿದ 10 ದಿನಗಳವರೆಗೂ ಸ್ಥೂಲಕಾಯ ದಿಂದ( ದೇಹದಿಂದ) ಬೇರ್ಪಟ್ಟ ಜೀವಿಯು ಹಸ್ತ ಪ್ರಮಾಣದಷ್ಟೇ ಬೆಳೆಯುವನು. ಬಳಿಕ ಮುಂದೆ ಯಮಲೋಕ ದಲ್ಲಿಒಂದು ವರ್ಷದ ಬಳಿಕವಷ್ಟೇ ಅಂಗುಷ್ಠ ಪ್ರಮಾಣದಲ್ಲಿ ಬೆಳೆದು ಯಮಭೋಗವನ್ನು ಕರ್ಮಾನು ಸಾರವಾಗಿ ಭೋಗಿಸುವನು.

ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿ ಶತೈರಪಿ |
ಅಭುಕ್ತ್ವಾ ಯಾತನಾಂ ಜಂತುರ್ಮಾನುಷಂ ಲಭತೇ ನಹಿ ||

    ನೂರು ಕೋಟಿಕಲ್ಪ ಕಾಲವಾದರೂ ಕರ್ಮಫಲವು ಅನುಭವಿಸಿದಲ್ಲದೇ ಅದು ಎಂದೆಂದೂ ಬಿಡದು. (ದೇವತೆಗಳಿಗೂ ಇದು ಬಿಟ್ಟಿಲ್ಲ. ಸ್ವತಃ ಯಮರಾಜನು ಅಣಿಮಾಂಡವ್ಯ ಋಷಿಗಳ ಶಾಪಕ್ಕೆ ತುತ್ತಾಗಿ ವಿದುರನಾಗಿ ಜನ್ಮವೆತ್ತಬೇಕಾಯಿತು). ಹಾಗೆಯೇ ಯಾತನೆ ಯನ್ನು ಅನುಭವಿಸದೆ ಜೀವಿಗೆ ಮನುಷ್ಯ ಜನ್ಮ ಲಭ್ಯವಿಲ್ಲ.
       ಸತ್ತ ಜೀವಿಗೆ ಪಿಂಡ ಪ್ರಧಾನ ಏಕೆಂದರೆ 10 ದಿನಗಳಲ್ಲಿ ಸೂಕ್ಷ್ಮ ದೇಹ ನಿರ್ಮಾಣವಾಗಿ ಜೀವಿಗೆ ಯಮಪುರಿ ಸೇರಲು ಶಕ್ತಿ ಸಿಗುವುದು. ಪಿಂಡ ಪ್ರಧಾನ ಕಾರ್ಯಗಳು ಮಾಡದಿದ್ದಲ್ಲಿ ಆತ್ಮವು ಪ್ರೇತವಾಗಿ ಅಲೆದಾಡಬೇಕಾಗುತ್ತದೆ ಎಂಬ ನಂಬಿಕೆ ಇದೆ. 
      ಬಹುತೇಕ ಜನಿವಾರಧಾರಿಗಳಲ್ಲಿ ಈ ಸಂಪ್ರದಾಯವಿರುತ್ತದೆ. ಉಳಿದಂತೆ ಆಯಾ ಜಾತಿ – ಸಮುದಾಯಗಳು ತಮ್ಮ ಪರಂಪರಾನುಗತ ನಂಬಿಕೆಯ ಅನುಸಾರ ಹಾಲು ತುಪ್ಪ ಬಿಡುವುದೇ ಮೊದಲಾದ ಆಚರಣೆಗಳನ್ನು ನಡೆಸುತ್ತವೆ.
    5 ನೇ ತಿಂಗಳಲ್ಲಿ ಯಮ ಕಿಂಕರರು ಜೀವಿಗೆ ದಾರಿ ಮಧ್ಯೆ ವಿಶ್ರಾಂತಿ ನೀಡುವರು. 6ನೇ ತಿಂಗಳಲ್ಲಿ ಆತ್ಮವು ವೈತರಣಿ ನದಿ ದಾಟುವುದು. (ದಕ್ಷನ ಯಜ್ಞದಲ್ಲಿ ದಾಕ್ಷಾಯಣಿಯು ದೇಹ ತ್ಯಾಗ ಮಾಡಿದಾಗ ಆ ನೋವಿನಲ್ಲಿ ರುದ್ರನು ಹರಿಸಿದ ಕಣ್ಣೀರಿನ ನದಿಯೇ ಈ ವೈತರಣಿ ನದಿಯಾಯಿತು ಎಂದು ಪ್ರತೀತಿ ಇದೆ). ಬಳಿಕ ಆತ್ಮವು ಯಮಪುರಿ ಸೇರುವುದು. ಇದೊಂದು ದೀರ್ಘ ಪ್ರಯಾಣವೇ ಹೌದು.
         ಮೊದಲು ಮನುಷ್ಯನ  ಕರ್ಮಾಕರ್ಮಗಳ ವಿಚಾರಣೆ ನಡೆಯುವುದು ಯಮಪುರಿಯಲ್ಲೇ. ನರಕದಲ್ಲೇ ಯಮಲೋಕವಿರುವುದು. ನರಕಗಳು ಭೂಮಿಯಿಂದ ದಕ್ಷಿಣ ದಿಕ್ಕಿಗೆ ನೀರಿನ ಮೇಲೆ ನಿಂತಿದೆ. ಇಲ್ಲಿಯೇ ಪಿತೃ ದೇವತೆಗಳ ವಾಸ.ಇಲ್ಲಿಂದಲೇ ಪಿತೃಗಳು ಕಾಲಕಾಲಕ್ಕೆ ತಮ್ಮ ವಂಶಜರು ನೀಡುವ ತರ್ಪಣಗಳನ್ನು ಸ್ವೀಕರಿಸಿ( ವರ್ಷಂ ಪ್ರತೀ ) ತಮ್ಮ ವಂಶದಲ್ಲಿ ಹುಟ್ಟುವವರಿಗೆ ಮಂಗಳವಾಗಲಿ ಎಂದು  ಹರಸುತ್ತಿರುತ್ತಾರೆ.
        ಯಮ ಧರ್ಮನು ನರಕಾಧಿಪತಿಯಾಗಿದ್ದು, ಮೃತ ಜೀವಿಗಳ ಪಾಪ ಪುಣ್ಯಗಳಿಗೆ ಅನುಗುಣವಾಗಿ ತಾಮಿಸ್ರ, ಅಂಧ ತಾಮಿಸ್ರ, ರೌರವ, ಮಹಾ ರೌರವ, ಕುಂಭಿಪಾಕ, ಕಾಲಸೂತ್ರ, ಅಸಿಪತ್ರವನ ಇತ್ಯಾದಿ21 ನರಕಗಳಲ್ಲಿ ಶಿಕ್ಷೆ ವಿಧಿಸುವನು. ಇದಲ್ಲದೇ ಜೀವಿಯು ಸೌಮ್ಯ, ಸೌರಿ ಪುರ, ನಗೇಂದ್ರ ಭವನ, ಕ್ರೌಂಚ, ವಿಚಿತ್ರ ಭವನ, ಶೀತಾಢ್ಯಬಹುಭೀತಪುರ, ಧರ್ಮ ಭವನ ಇತ್ಯಾದಿ ಫಲಗಳನ್ನು ಅನುಭವಿಸಿ ಬಳಿಕ ಪುಣ್ಯಾಂಶಗಳಿಗೆ ಅನುಸಾರವಾಗಿ ಸ್ವಗಕ್ಕೆ( ವೈಕುಂಠ ಅಥವಾ ಕೈಲಾಸ) ಕ್ಕೆ ತೆರಳುವುದು. ಬಳಿಕ ಸ್ವರ್ಗದಲ್ಲಿ ಪುಣ್ಯಾಂಶ ಅನುಭವಿಸಿದ ಬಳಿಕ ನಿಗದಿತ ಯೋನಿಯೊಂದರಲ್ಲಿ ಮತ್ತೆ ಕರ್ಮಾನುಸಾರ ಭೂಮಿಗೆ ಮರಳುವುದು. ಇಲ್ಲಿಗೆ ಜೀವಿಯ ಜನನ – ಮರಣ ಚಕ್ರದ ಒಂದು ಸುತ್ತು ಮುಗಿದು ಇನ್ನೊಂದರ ಆರಂಭವಾಗುವುದು !

ಓಂ ನಮೋ ಭಗವತೇ ವಾಸುದೇವಾಯ

  ವಿವಾಹದಲ್ಲಿ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸೋದ್ಯಾಕೆ ?

Leave a Reply

Your email address will not be published. Required fields are marked *

Translate »