ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅನ್ನದಾನ ದ ಮಹತ್ವದ ಕಥೆ

ಅನ್ನದಾನ ದ ಮಹತ್ವ

ಬಹಳ ವರ್ಷಗಳ ಹಿಂದಿನ ಮಾತು. ಶ್ರೀಮಂತ ವರ್ತಕನ ಬಳಿ ಒಬ್ಬ ನೌಕರನು ಶ್ರದ್ಧೆಯಿಂದ ಕೆಲಸವನ್ನು ಮಾಡಿಕೊಂಡಿದ್ದ. ಶ್ರೀಮಂತನು ವಹಿಸುವ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ನೌಕರನು ವರ್ತಕನ ವಿಶ್ವಾಸವನ್ನು ಗಳಿಸಿ, ಆತನ ಪ್ರೀತಿಗೆ ಪಾತ್ರನಾಗಿದ್ದ.

ನೌಕರನು ಪುರಿ ಜಗನ್ನಾಥಸ್ವಾಮಿಯ ಪರಮಭಕ್ತನೂ ಆಗಿದ್ದ. ಕೆಲಸವಿಲ್ಲದ ಸಮಯವನ್ನು ಜಗನ್ನಾಥನ ಭಜನೆ, ಕೀರ್ತನೆಯಲ್ಲಿ ಕಳೆಯತ್ತಿದ್ದ. ಅನೇಕ ಸತ್ಸಂಗಗಳಲ್ಲಿ ಭಾಗಿಯಾಗುತ್ತಿದ್ದ. ಸಾಧು-ಸಂತರ, ಸಜ್ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ. ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಪುರಿ ಜಗನ್ನಾಥ ಪುರಿಯ ಯಾತ್ರೆ ಮಾಡಬಯಸಿದ್ದ. ಆದರೆ ಕಾಲಕೂಡಿ ಬಂದಿರಲಿಲ್ಲ. ಅದೊಂದು ದಿನ ಅಂಥ ಸಕಾಲವೂ ಕೂಡಿಬಂದಿತು. ನೌಕರನು ಶ್ರೀಮಂತ ವರ್ತಕನ ಬಳಿ ತಾನು ಜಗನ್ನಾಥಪುರಿಗೆ ಯಾತ್ರೆ ಹೊರಟಿರುವುದಾಗಿ ತಿಳಿಸಿ, ಪಾದಯಾತ್ರೆ ಪೂರೈಸಿಕೊಂಡು ಬರುವುದಕ್ಕಾಗಿ ತನಗೆ ಒಂದು ತಿಂಗಳು ರಜೆಯನ್ನು ನೀಡಬೇಕಾಗಿ ಕೋರಿಕೊಂಡನು.

ಆಗ ವರ್ತನು, “ನನಗಂತೂ ಈ ವ್ಯಾಪಾರ, ವ್ಯವಹಾರದ ಜಂಜಾಟದಲ್ಲಿ ಯಾವುದೇ ತೀರ್ಥಯಾತ್ರೆ, ಪಾದಯಾತ್ರೆ ಮಾಡುವುದಕ್ಕೆ ಆಗುವುದಿಲ್ಲ. ದೊಡ್ಡದಾದ ಸಂಸಾರವನ್ನು ಕಟ್ಟಿಕೊಂಡ ಮೇಲೆ ದೇವರಿಗಾಗಿ ಸಮಯ ಮೀಸಲಿಡುವುದಕ್ಕೆ ಆಗುವುದೇ ಇಲ್ಲ. ಈ ಕುರಿತು ನನಗೆ ನೋವಿದೆ. ನಮಗೆ ಇಷ್ಟೆಲ್ಲವನ್ನು ಕೊಟ್ಟ ದೇವರನ್ನು ನಾವು ಮರೆತು ಬಿಡುತ್ತೇವೆ. ದೇವರು ನಮ್ಮನ್ನು ಕ್ಷಮಿಸುವನೋ ಇಲ್ಲವೋ ಆದರೆ ನಮ್ಮನ್ನೊಂದು ಅಪರಾಧಿಭಾವ ಕಾಡುತ್ತಿರುತ್ತದೆ. ಹೇಗೂ ನೀನು ಪುರಿಗೆ ಹೋಗುತ್ತಿರುವೆ. ಇದೋ, ಈ ಐವತ್ತು ರೂ.ಗಳನ್ನು ತೆಗೆದು ಕೋ. ಇದನ್ನು ಜಗನ್ನಾಥಸ್ವಾಮಿಯ ಸನ್ನಿಧಿಗೆ ಅರ್ಪಿಸಿಬಿಡು. ನನ್ನ ಪರವಾಗಿ ದೇವರಿಗೆ ನನ್ನ ಈ ಕಾಣಿಕೆಯನ್ನು ಅರ್ಪಿಸಿಬಿಡು. ಜಗನ್ನಾಥನಲ್ಲಿ ಕ್ಷಮೆ ಕೇಳಿ ನನ್ನನ್ನು ಕ್ಷಮಿಸುವುದಕ್ಕೆ ಹೇಳು” ಎಂದನು. ಅದು ಸಮೃದ್ಧಿ ಯ ಕಾಲ, ಇಂದಿನ 5000 ಕ್ಕೆ ಸಮ ಆಗಿನ 50 ರೂಪಾಯಿ.

  ಶ್ರೀ ರೇಣುಕಾ ದೇವಿ ಚರಿತ್ರೆ - ಯಲ್ಲಮ್ಮ ದೇವಿ

ನೌಕರನು ವರ್ತಕನು ನೀಡಿದ 50 ರೂ.ಗಳನ್ನು ತೆಗೆದುಕೊಂಡು ಸಹಯಾತ್ರಿಗಳೊಂದಿಗೆ ಜಗನ್ನಾಥಪುರಿಗೆ ಪಾದಯಾತ್ರೆ ಹೊರಟನು. ಅನೇಕ ದಿನಗಳ ನಂತರ ಜಗನ್ನಾಥಪುರಿಯನ್ನು ತಲುಪಿದನು. ಇನ್ನೇನು ಜಗನ್ನಾಥಸ್ವಾಮಿಯ ದರ್ಶನ ಪಡೆಯುವ ಸಲುವಾಗಿ ದೇವಸ್ಥಾನಕ್ಕೆ ಹೂರಟಿರುತ್ತಾನೆ. ಮಾರ್ಗಮಧ್ಯದಲ್ಲಿ ಒಂದು ದೊಡ್ಡ ಭಕ್ತ ಸಮೂಹ ಕಣ್ಣಿಗೆ ಬೀಳುತ್ತೆ. ಭಕ್ತರು ಭಗವಂತನ ಕೀರ್ತನೆ ಮಾಡಿಕೊಂಡಿರುವುದು ನೋಡುತ್ತಾನೆ . ಕುತೂಹಲದಿಂದ ಗಮನಿಸಿದಾಗ ಆತನಿಗೆ ಕೀರ್ತನೆಯಲ್ಲಿ ತೊಡಗಿರುವ ಭಕ್ತರಲ್ಲಿ ಬಹಳ ಜನ ಬಳಲಿದವರಂತೆ ಮತ್ತು ಹಸಿದವರಂತೆ ಕಾಣುತ್ತದೆ. ಅವರಿಗೆ ಹಸಿವೆಯಾಗಿದೆ ಎಂಬ ವಿಷಯ ಅರಿತಂತೆ ಆತನಿಗೆ ಅವರೆಲ್ಲರಿಗೂ ಊಟ ಮಾಡಿಸಬೇಕು, ಭಂಡಾರದ ವ್ಯವಸ್ಥೆ ಮಾಡಬೇಕೆನಿಸಿತು. ಆ ಕೂಡಲೆ ಆತ ಭಜನೆ ಮಾಡಿಕೊಂಡಿದ್ದ ಭಕ್ತರಿಗೆಲ್ಲ ಮೃಷ್ಟಾನ್ನ ಭೋಜನವನ್ನು ಮಾಡಿಸುತ್ತಾನೆ. ಭಗವದ್ಭಕ್ತರ ಭಂಡಾರಕ್ಕೆ (ಭೋಜನ) ಒಟ್ಟು 48 ರೂ. ಖರ್ಚು ಆಗುತ್ತದೆ. ನೌಕರನು ಶ್ರೀಮಂತ ವರ್ತಕನು ನೀಡಿದ್ದ 50 ರೂ.ಗಳಲ್ಲಿಂದ 48 ರೂಗಳನ್ನು ತೆಗೆದು ಭಂಡಾರದ ಖರ್ಚಿಗೆ ನೀಡಿದ. ಇನ್ನೆರಡು ರೂಪಾಯಿಗಳನ್ನು ದೇವಸ್ಥಾನಕ್ಕೆ ಹೋಗಿ ಜಗನ್ನಾಥನ ಸನ್ನಿಧಾನಕ್ಕೆ ಕೈಮುಗಿದು ದೇವರ ಹುಂಡಿ ಪೆಟ್ಟಿಗೆಯಲ್ಲಿ ಹಾಕಿದನು. ವರ್ತಕನ ಹಣವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿದ್ದರಿಂದ, ಆತ ಕೇಳಿದರೆ ಹಣವನ್ನು ಜಗನ್ನಾಥನಿಗೆ ಅರ್ಪಿಸಿದ್ದೇನೆ ಎಂದು ಹೇಳೋಣವೆಂದು ಮನಸ್ಸಿನಲ್ಲಿಯೋ ಅಂದುಕೊಂಡನು.

  ಗುರು ಪೂರ್ಣಿಮೆ ಮತ್ತು ವೇದವ್ಯಾಸರು ಹುಟ್ಟಿದ ಕಥೆ

ಇತ್ತ ಶ್ರೀಮಂತ ವರ್ತಕನ ಕನಸಿನಲ್ಲಿ ಕಾಣಿಸಿಕೊಂಡ ಜಗನ್ನಾಥಸ್ವಾಮಿಯು, ‘ನಾನು ನಿನ್ನ ನಲವತ್ತೆಂಟು ರೂಪಾಯಿಯ ಧರ್ಮಕಾಣಿಕೆಯನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದೇನೆ, ನನ್ನ ಆಶೀರ್ವಾದ ನಿನ್ನ ಮೇಲಿದೆ’ ಎಂದು ಹೇಳಿ ಅಂತರ್ಧಾನನಾದನು.
ವರ್ತಕ ಯೋಚಿಸಿದ, ‘ನಾನು ನೌಕರನಿಗೆ ಕೊಟ್ಟಿದ್ದು 50ರೂ.ಗಳು. ನನ್ನ ಕನಸಿನಲ್ಲಿ ಬಂದು ಜಗನ್ನಾಥನು 48 ರೂ.ಗಳು ಸಂದಾಯವಾಗಿದೆ, ನಿನ್ನ ಕಾಣಿಕೆಯನ್ನು ಹರ್ಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳುತ್ತಿರುವನಲ್ಲಾ? ನನ್ನ ನೌಕರ ಪ್ರಾಮಾಣಿಕ. ಆತ ಹೀಗೆಲ್ಲ ಮಾಡುವವನಲ್ಲ’ ಎಂದು ತನಗೆತಾನೇ ಹೇಳಿಕೊಂಡು ಸುಮ್ಮನಾದ.

ಇದಾದ ಕೆಲದಿನಗಳ ನಂತರ ನೌಕರನು ಯಾತ್ರೆಯನ್ನು ಮುಗಿಸಿಕೊಂಡು ಬಂದನು. ವರ್ತಕನ ಬಳಿ ಆತನ ಕಾಣಿಕೆಯನ್ನು ದೇವರಿಗೆ ಅರ್ಪಿಸಿರುವುದಾಗಿ ತಿಳಿಸಿದನು. ಆಗ ವರ್ತಕನು, “ನೀನು ನಲವತ್ತೆಂಟು ರೂಪಾಯಿಗಳನ್ನು ಮಾತ್ರ ದೇವರಿಗೆ ಅರ್ಪಿಸಿರುವೆ. ಜಗನ್ನಾಥನೇ ಖುದ್ದಾಗಿ ಬಂದು ನನ್ನ ಕನಸಿನಲ್ಲಿ ಹೇಳಿದ. ಇನ್ನೆರಡು ರೂಪಾಯಿಗಳನ್ನು ಏನು ಮಾಡಿದೆ?” ಎಂದು ನೌಕರನನ್ನು ಕೇಳಿದನು.

ಆಗ ನೌಕರನು ತಾನು ನಲವತ್ತೆಂಟು ರೂಪಾಯಿಗಳನ್ನು ಖರ್ಚುಮಾಡಿ ಹಸಿದ ಭಕ್ತರಿಗೆ ಮತ್ತು ಸಂತರಿಗೆ ಭೋಜನವನ್ನು ಮಾಡಿಸಿರುವುದಾಗಿ ಹೇಳಿ, ಉಳಿದೆರಡು ರೂ.ಗಳನ್ನು ಮಾತ್ರ ದೇವರ ಹುಂಡಿಯಲ್ಲಿ ಹಾಕಿರುವುದಾಗಿ ತಿಳಿಸಿದನು. ನೌಕರನ ಮಾತು ಕೇಳುತ್ತಲೇ ವರ್ತಕನು ಗದ್ಗದಿತನಾದನು. ಆನಂದಬಾಷ್ಪದಿಂದ ಕೂಡಿ ನೌಕರನಿಗೆ ನಮಸ್ಕಾರವನ್ನು ಮಾಡುತ್ತಾ, “ನಿನ್ನಿಂದಾಗಿ ನನ್ನ ಜೀವನ ಪಾವನವಾಯಿತು. ನನ್ನ ಹಣವನ್ನು ದೇವರು ಸ್ವೀಕರಿಸಿದ್ದಾನೆ. ಸ್ವತಃ ದೇವರೇ ನನ್ನ ಕನಸಿನಲ್ಲಿ ಬಂದು ಈ ವಿವರವನ್ನು ನೀಡಿದ್ದಾನೆ. ನೀನು ಮನೆಯಲ್ಲಿಯೇ ಕುಳಿತುಕೊಂಡ ನನಗೆ ಜಗನ್ನಾಥನ ದರ್ಶನ ಮಾಡಿಸಿರುವೆ. ನಾನು ನಿನಗೆ ಜೀವನಪೂರ್ತಿ ಕೃತಜ್ಞನಾಗಿರುವೆ. ಇವತ್ತು ನನಗೆ ಯಾರ ದುಡ್ಡು ಹಸಿದವರ ಹೊಟ್ಟೆಯನ್ನು ತುಂಬಿಸುವುದಕ್ಕಾಗಿ ಉಪಯೋಗಿಸಲ್ಪಡುವುದೋ ಅದುವೇ ದೇವರನ್ನು ಸೇರುತ್ತದೆ ಎಂಬ ಸತ್ಯದ ಅರಿವಾಯಿತು. ದೇವರು ಸತ್ಪಾತ್ರಕ್ಕೆ ಸಂದಾಯವಾದ ದುಡ್ಡನ್ನು ಮಾತ್ರ ಸ್ವೀಕರಿಸುತ್ತಾನೆ. ದೇವರನ್ನು ನನ್ನ ಬಳಿಗೆ ಕರೆತಂದ ನೀನು ಇನ್ನು ಮೇಲೆ ನನ್ನ ನೌಕರನಲ್ಲ, ನೀನು ನನ್ನ ವ್ಯಾಪಾರದಲ್ಲಿ ಭಾಗೀದಾರ” ಎಂದನು.

  ಹೋಳಿ ಹುಣ್ಣಿಮೆ - ಪುರಾಣ ಕಥೆ

ನಿಜ! ದೇವರು ಎಂಥ ದಾನವನ್ನು ಇಷ್ಟಪಡುತ್ತಾನೆ ಎಂದು ಮಹಾತ್ಮರು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಆದರೂ ನಾವುಗಳು ವೃಥಾ ಹೋಗಿ ದೇವರ ಹುಂಡಿಗೆ ಹಣವನ್ನು ಹಾಕುತ್ತಿರುತ್ತೇವೆ. ದೇವರ ಹುಂಡಿಗೆ ಹಾಕಿದ ಹಣ ದೇವರಿಗೆ ಸೇರುವುದಿಲ್ಲ. ಅದು ಮುಜರಾಯಿ ಇಲಾಖೆಗೋ, ಮತ್ತಿನ್ನಾರಿಗೋ ಸೇರುತ್ತದೆ. ದೇವರಿಗೆಂದೇ ನಾವು ಕೊಡುವ ಹಣ ದೇವರನ್ನೇ ಸೇರಬೇಕೆಂದರೆ ನಾವು ಆ ಹಣವನ್ನು ದೀನರಿಗೆ, ಬಡವರಿಗೆ, ಹಸಿವಿನಿಂದ ನೊಂದ ಜನರಿಗೆ ಕೊಡಬೇಕು. ಹಸಿದವರ ಹಸಿವು ನೀಗಿಸುವ ಹಣ ದೇವರನ್ನು ಸೇರುತ್ತದೆ.
ಅದಕ್ಕೆ ಉಪನಿಷತ್ ನಲ್ಲಿ ಅನ್ನಂ ಪ್ರಾಣಮ್, ಅನ್ನಂ ಜೀವಾನ ಮಾಹುಹು ಎಂದಿದೆ.

Leave a Reply

Your email address will not be published. Required fields are marked *

Translate »