ಬೆಂಗಳೂರಿನಲ್ಲಿ ‘ಮಲ್ಲೇಶ್ವರಂ’ ಎಂದರೆ ಎಲ್ಲರಿಗೂ ಗೊತ್ತಿರುವ ಏರಿಯಾ. ಮಲ್ಲೇಶ್ವರ ಎಂಬುದು ಒಂದು ಬಡಾವಣೆಯ ಹೆಸರು. ಇಲ್ಲಿ ಇರುವ ಪುರಾತನ ದೇವಾಲಯವಾದ ‘ಕಾಡು ಮಲ್ಲೇಶ್ವರ’ ಅಥವಾ ‘ಮಲ್ಲಿಕಾರ್ಜುನ ದೇವಸ್ಥಾನ’ದ ಕಾರಣಕ್ಕೆ ಇದಕ್ಕೆ ಮಲ್ಲೇಶ್ವರ ಎಂಬ ಹೆಸರು ಬಂದಿದೆ. ಈ ಕಾಡು ಮಲ್ಲೇಶ್ವರ ಲಿಂಗ ಉದ್ಭವ ಮೂರ್ತಿ ಎಂಬುದು ವಿಶೇಷ. ಇದು ಯಾವುದೋ ಶಿಲ್ಪಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪದ ಲಿಂಗವಲ್ಲ, ತಾನೇ ತಾನಾಗಿ ಉದ್ಭವಿಸಿದ್ದು.
ಆದರೆ, ಈ ಮಲ್ಲೇಶ್ವರಂನ ಕಥೆ ರೋಚಕವಾಗಿದೆ. ಬಹಳ ಹಿಂದೆ ವೀಲ್ಯದೆಲೆ ಮಲ್ಲಪ್ಪ ಶೆಟ್ಟರು (Mallappa Shetty) ಊರಿಗೆ ಹಿಂತಿರುಗಲಾಗದೇ ಅಲ್ಲಿಯೇ ರಾತ್ರಿ ಒಂದು ಕಡೆ ತಂಗಿದ್ದರು. ಊಟಕ್ಕೆ ಸಿದ್ಧಪಡಿಸಲೆಂದು ಅಲ್ಲಿಯೇ ಇದ್ದ ಎರಡು ಕಲ್ಲುಗಳನ್ನು ಒಂದುಕಡೆ ಇಟ್ಟು ಅದಕ್ಕೆ ಬೆಂಕಿ ಹಚ್ಚಿ ಅನ್ನ ಮಾಡಿಕೊಂಡಿದ್ದರು. ಆದರೆ, ಬೆಂದಿದ್ದ ಅನ್ನ ರಕ್ತದ ಬಣ್ಣಕ್ಕೆ ತಿರುಗಿತ್ತು. ಅದನ್ನು ಕಂಡ ಮಲ್ಲಪ್ಪ ಶೆಟ್ಟರು ಹೆದರಿ ಪ್ರಜ್ಞೆ ತಪ್ಪಿ ಬೀಳ್ತಾರೆ. ಎಚ್ಚರವಾಗಿ ನೋಡಲಾಗಿ ಒಲೆಗೆ ಬಳಸಿದ್ದ ಒಂದು ಕಲ್ಲು ಶಿವಲಿಂಗದ ಆಕಾರ ಪಡೆದುಕೊಂಡಿತ್ತು.
ತಮ್ಮಿಂದ ನಡೆದ ತಪ್ಪಿನ ಅರಿವಾಗಿ ಮಲ್ಲಪ್ಪ ಶೆಟ್ಟರು ಅಲ್ಲಿಯೇ ದೇವಸ್ಥಾನ ನಿರ್ಮಿಸುತ್ತಾರೆ. ಆ ಸ್ಥಳಕ್ಕೆ ಕೂಡ ಪೌರಾಣಿಕ ಹಿನ್ನೆಲೆ ಇದೆ. ಗೌತಮ ಮಹರ್ಷಿಗೆ ಶಿವ ಅಲ್ಲಿ ಪ್ರತ್ಯಕ್ಷರಾಗಿ ದರ್ಶನ್ ನೀಡಿದ್ದರೆಂದು ಪ್ರತೀತಿ ಇದೆ. ಅಲ್ಲಿ ಮೊದಲು ದೊಡ್ಡ ಕಾಡಿತ್ತು. ಅಲ್ಲಿ ನಿರ್ಮಿಸಲಾದ ಆ ದೇವಸ್ಥಾನಕ್ಕೆ ‘ಕಾಡು ಮಲ್ಲೇಶ್ವರ’ ಎಂಬ ಹೆಸರು ಬಂತು. ಹೀಗೆ, ಕಾಡುಮಲ್ಲೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಕಾರಣಕರ್ತರು ವೀಳ್ಯದೆಲೆ ವರ್ತಕರಾದ ಮಲ್ಲಪ್ಪ ಶೆಟ್ಟರು.
ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವಾಗ ಕೃಷ್ಣರಾಜಪುರ ದಾಟಿ ಸ್ವಲ್ಪ ದೂರ ಹೋಗುತ್ತಿರುವಂತೆ, ರಸ್ತೆಯಿಂದ ಎರಡೂ ಬದಿಯಲ್ಲಿ ಕಾಣುವಂತೆ ಒಂದು ವಿಶಾಲವಾದ ಕೆರೆಯಿದೆ. ಇದನ್ನು 18ನೆಯ ಶತಮಾನದ ಅಂತ್ಯದ ಕಾಲದಲ್ಲಿ (1890) ಮಲ್ಲಪ್ಪ ಶೆಟ್ಟರು ನಿರ್ಮಾಣ ಮಾಡಿದ್ದಾರೆ, ಕೆಆರ್ ಪುರಂ ದಾಟಿ ವೈಟ್ಫೀಲ್ಡ್ ಬಳಿ ಇರುವ ಈ ಕೆರೆಯನ್ನು ಮಲ್ಲಪ್ಪ ಶೆಟ್ಟರು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ. ಕಷ್ಟವೆಂದು ಮನೆ ಬಾಗಿಲಿಗೆ ಬಂದವರಿಗೆ ಹೇರಳವಾಗಿ ಹಣದ ಸಹಾಯ ಮಾಡಿದ್ದಾರೆ.
ಅಷ್ಟೇ ಅಲ್ಲ, ಇಂದಿನ ವಿಕ್ಟೋರಿಯಾ ಅಸ್ಪತ್ರೆ ಆವರಣದಲ್ಲಿರುವ ವಾಣಿ ವಿಲಾಸ ಆಸ್ಪತ್ರೆಯೊಂದಿಗೆ ವಿಲೀನವಾಗಿರುವ ಬೆಂಗಳೂರಿನ ಮೊಟ್ಟಮೊದಲ ಹೆರಿಗೆ ಆಸ್ಪತ್ರೆ ನಿರ್ಮಿಸಿದ್ದು ಕೂಡ ಈ ಮಲ್ಲಪ್ಪ ಶೆಟ್ಟರೇ ಹೌದು. ಜೊತೆಗೆ, ಹೆರಿಗೆ ಆಸ್ಪತ್ರೆಗೆ ಚಂದಾ ಎತ್ತಿದ ಸಮಯದಲ್ಲಿ 25 ಸಾವಿರ ಬೆಳ್ಳಿ ನಾಣ್ಯಗಳನ್ನು ಸ್ವಂತವಾಗಿ ನೀಡಿ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದರಂತೆ ಮಲ್ಲಪ್ಪ ಶೆಟ್ಟರು.
ಅಷ್ಟೇ ಅಲ್ಲ, ಹಲವಾರು ಗುಡಿ-ಗೋಪುರಗಳು, ಅನ್ನ ಛತ್ರಗಳು, ಕಾಡು ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹೀಗೆ ಹತ್ತುಹಲವು ಸಾಮಾಜಿಕ-ಧಾರ್ಮಿಕ ಕೆಲಸಗಳನ್ನು ಈ ಶೆಟ್ಟರು ಮಾಡಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಯೇ ಅನ್ನ ದಾಸೋಹ ಇರಲಿ, ಅಲ್ಲಿ ಶೆಟ್ಟರು ಯಥೇಚ್ಛವಾಗಿ ದಾನ ಮಾಡುತ್ತಿದ್ದರು. ಜೊತೆಗೆ, ಬರಗಾಲ, ಕ್ಷಾಮ ಯಾವುದೇ ಬರಲಿ, ತಮ್ಮ ಸಂಪತ್ತನ್ನು ಹೇರಳವಾಗಿ ಖರ್ಚು ಮಾಡುತ್ತಿದ್ದರು.




